ಕನಕಗಿರಿ: ಪಾಲಕರು ಮಕ್ಕಳಿಗೆ ಆಸ್ತಿ ಮಾಡುವ ಬದಲು ಅವರನ್ನೇ ಆಸ್ತಿಯನ್ನಾಗಿ ಭಾವಿಸಿ ಉತ್ತಮ ಶಿಕ್ಷಣ ಕೊಡಿಸಲು ಮುಂದಾಗಬೇಕಿದೆ ಎಂದು ಕೆ.ಕಾಟಾಪುರ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ವೆಂಕೋಬ ಪೂಜಾರ ಹೇಳಿದರು.
ಕೆ.ಕಾಟಾಪೂರ ಸ.ಕಿ.ಪ್ರಾ. ಶಾಲೆಯಲ್ಲಿ ಮಕ್ಕಳ ದಿನದ ಅಂಗವಾಗಿ ದೇಶದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬುಧವಾರ ಮಾತನಾಡಿದರು.
ಮಕ್ಕಳು ಪುಸ್ತಕದ ಅಭ್ಯಾಸ, ಆಟೋಟ ಇತರ ಚಟುವಟಿಕೆಗಳಿಗಿಂತ ಹೆಚ್ಚಾಗಿ ಮೊಬೈಲ್ ಗೀಳಿಗೆ ಬೀಳುತ್ತಿದ್ದಾರೆ. ಇದರಿಂದ ಅವರ ಆರೋಗ್ಯ ಹಾಗೂ ಶಿಕ್ಷಣದ ಮೇಲೆ ದುಷ್ಪರಿಣಾಮ ಬೀಳುತ್ತಿದೆ. ಇತ್ತೀಚೆಗೆ ಮಕ್ಕಳಲ್ಲಿ ದೃಷ್ಟಿದೋಷದಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ಅದಕ್ಕಾಗಿ ಮಕ್ಕಳನ್ನು ಮೊಬೈಲ್ನಿಂದ ದೂರವಿಡಬೇಕು. ನೈತಿಕ ಪಾಠ, ಹಿರಿಯರಿಗೆ ಗೌರವಿಸುವುದನ್ನು ಕಲಿಸಬೇಕು. ಮಕ್ಕಳನ್ನು ಕೂಲಿ ಕೆಲಸಕ್ಕೆ ಬಳಸಿಕೊಳ್ಳದೆ ಶಾಲೆಗೆ ಕಳುಹಿಸುವ ಕೆಲಸ ಮಾಡಬೇಕು ಎಂದರು.
ಮಕ್ಕಳಿಂದ ದಂಡಹಾರ ಹಾಕುವುದು, ದಂಡ ಹಾರುವುದು, ಗೂಳಿ ಕಾಳಗ, ಹಾರಣ್ಣ-ತೂರಣ್ಣ, ಕುಕ್ಕುಟ ಕಾಳಗ ಇತರ ದೇಶಿ ಆಟಗಳನ್ನು ಆಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅತಿಥಿ ಶಿಕ್ಷಕರಾದ ವೀರನಗೌಡ ಪಾಟೀಲ್, ಈರಮ್ಮ ಪಚ್ಚಿ, ನಾಗರತ್ನ ಪಾಟೀಲ್, ಅಂಗನವಾಡಿ ಕಾರ್ಯಕರ್ತೆ ರೇಣುಕಾ, ಸಹಾಯಕಿ ಹನುಮಮ್ಮ ಇದ್ದರು.