ಕನಕಗಿರಿ ತಾಲೂಕಿನ ಬಸರಿಹಾಳ ಗ್ರಾಮಕ್ಕೆ ಸಂಸದ ಸಂಗಣ್ಣ ಕರಡಿ ಭೇಟಿ ನೀಡಿ ಮೃತ ಬಾಲಕಿಯ ಪಾಲಕರಿಗೆ ಸಾಂತ್ವನ ಹೇಳಿದರು. ಗ್ರಾಪಂ ಉಪಾಧ್ಯಕ್ಷ ಶಿವಪ್ಪ, ಸದಸ್ಯ ಹೊಳೇಗೌಡ ಇತರರಿದ್ದರು.
ಕನಕಗಿರಿ: ತಾಲೂಕಿನ ಬಸರಿಹಾಳ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ವಾಂತಿಬೇಧಿಗೆ ತುತ್ತಾಗಿ ಇಬ್ಬರು ಸಾವನ್ನಪ್ಪಿದ ಪ್ರಕರಣ ಹಿನ್ನೆಲೆ ಸಂಸದ ಸಂಗಣ್ಣ ಕರಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ಕಂದಕೂರ್ ಹಾಗೂ ಡಾ.ಸಹನಾ ಅವರಿಂದ ಗ್ರಾಮದ ಆರೋಗ್ಯ ಪರಿಸ್ಥಿತಿ ಕುರಿತು ಮಾಹಿತಿ ಪಡೆದುಕೊಂಡರು. ಕಳೆದ ಮೂರ್ನಾಲ್ಕು ದಿನಗಳಿಂದ ಗ್ರಾಮದಲ್ಲಿ ಯಾವುದೇ ಪ್ರಕರಣಗಳು ಕಂಡುಬಂದಿಲ್ಲವಾಗಿದ್ದು, ಪರಿಸ್ಥಿತಿ ಹತೋಟಿಗೆ ಬರುತ್ತಿದೆ ಎಂದು ವೈದ್ಯರು ತಿಳಿಸಿದರು.
ಗ್ರಾಮಕ್ಕೆ ಟ್ಯಾಂಕರ್ ಮೂಲಕವೇ ಕುಡಿವ ನೀರನ್ನು ಒದಗಿಸಲಾಗುತ್ತಿದೆ ಎಂದು ಪಿಡಿಒ ರವೀಂದ್ರ ಕುಲಕರ್ಣಿ ತಿಳಿಸಿದರು. ವಾಂತಿ ಬೇಧಿಯಿಂದ ಮೃತಪಟ್ಟ ಬಾಲಕಿ ಶೃತಿ ಹಾಗೂ ಅನಾರೋಗ್ಯದಿಂದ ಮೃತಪಟ್ಟ ಹೊನ್ನಮ್ಮರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ವೈಯಕ್ತಿಕ ಪರಿಹಾರ ನೀಡಿದರು. ನಂತರ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಜೆಜೆಎಂ ಕಾಮಗಾರಿ ಪರಿಶೀಲಿಸಿದರು.
ಇಂಜಿನಿಯರ್ಗಳಿಗೆ ಗುಣಮಟ್ಟ ಕಾಮಗಾರಿ ನಡೆಸುವಂತೆ ತಿಳಿಸಿದರು. ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮದ ಪರಿಸ್ಥಿತಿ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡರು. ತಾಪಂ ಇಒ ಚಂದ್ರಶೇಖರ್ ಕಂದಕೂರು, ಆರ್ಡಬ್ಲುೃಎಸ್ ಜೆಇ ಕಿಶೋರ್, ವೈದ್ಯಾಧಿಕಾರಿ ಸಹನಾ, ಪಿಡಿಓ ರವೀಂದ್ರ ಕುಲಕರ್ಣಿ, ಗ್ರಾಪಂ ಉಪಾಧ್ಯಕ್ಷ ಶಿವಪ್ಪ ಸುಳೇಕಲ್ ಇತರರಿದ್ದರು.