ಕಂಪ್ಲಿ: ರೈತರ ಅನುಕೂಲಕ್ಕಾಗಿ ಜೂ.30ರೊಳಗೆ ಐಸಿಸಿ ಸಭೆ ಕರೆದು ಎಲ್ಲ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಶಾಸಕ ಜೆ.ಎನ್.ಗಣೇಶ್ ಸರ್ಕಾರವನ್ನು ಒತ್ತಾಯಿಸಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ವರ್ಷ ನೀರಾವರಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ, ತುಂಗಭದ್ರಾ ಜಲಾಶಯದಲ್ಲಿ 40 ಟಿಎಂಸಿ ಅಡಿ ನೀರು ಇದ್ದಾಗ ಕಾಲುವೆಗಳಿಗೆ ನೀರು ಹರಿಸಿದ್ದರು. ಇದರಿಂದ ರೈತರಿಗೆ ತುಂಬ ಅನುಕೂಲವಾಗಿತ್ತು. ಸದ್ಯ ಜಲಾಶಯದಲ್ಲಿ 28 ಟಿಎಂಸಿ ನೀರು ಸಂಗ್ರಹವಿದೆ. ನೀರಿನ ಒಳ ಹರಿವೂ ಇದೆ. ಮೇಲಾಗಿ ಮಳೆ ವಾತಾವರಣ ಇದೆ. ಜೂ.30ರೊಳಗೆ 40 ಟಿಎಂಸಿಗೂ ಅಧಿಕ ನೀರು ಸಂಗ್ರಹವಾಗುವ ಸಾಧ್ಯತೆ ಇದೆ. ಆದ್ದರಿಂದ ಐಸಿಸಿ ಸಭೆ ಜರುಗಿಸಿ, ಎಲ್ಎಲ್ಸಿ, ಎಚ್ಎಲ್ಸಿ, ವಿಎನ್ಸಿಗಳಿಗೆ ನೀರು ಹರಿಸಬೇಕು. ಕಾಲುವೆಗಳಿಗೆ ಮುಂಚಿತವಾಗಿ ನೀರು ಹರಿಸಿದಲ್ಲಿ ಜನವರಿಯಲ್ಲಿ ನೀರಿನ ಅಗತ್ಯತೆ ಬೀಳುವುದಿಲ್ಲ ಎಂದರು.
ಕೆರೆಗಳಿಗೆ ನಿಗದಿಪಡಿಸಿದ ನೀರು ಹರಿಸಿ ಭರ್ತಿಗೊಳಿಸುವಂತೆ ಐಸಿಸಿ ಸಭೆಯಲ್ಲಿ ಒತ್ತಾಯಿಸಲಾಗುವುದು. ಇನ್ನು ಜಿಲ್ಲೆಯ ರೈತರಿಗೆ ಸೂಕ್ತ ಪ್ರಮಾಣದಲ್ಲಿ ಮೆಣಸಿನಕಾಯಿ ಬಿತ್ತನೆ ಬೀಜ ವಿತರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಶಾಸಕ ಗಣೇಶ್ ದೂರಿದರು.