ಕಂಪ್ಲಿ: ಸೇವಾ ಭದ್ರತೆ ಹಾಗೂ ಗೌರವ ಧನ ಹೆಚ್ಚಿಸಬೇಕು ಎಂದು ಅತಿಥಿ ಉಪನ್ಯಾಸಕರ ಸಂಘದ ತಾಲೂಕು ಘಟಕವು ಗುರುವಾರ ತಾಲೂಕು ಕಚೇರಿಯ ಶಿರಸ್ತೇದಾರ್ ಜಿ.ಪಂಪಾಪತಿಗೆ ಮನವಿ ಸಲ್ಲಿಸಿತು.
ರಾಜ್ಯದ 430 ಸರ್ಕಾರಿ ಪದವಿ ಕಾಲೇಜುಗಳಲ್ಲಿ 14,564 ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ. ಬಹುತೇಕರ ವಯೋಮಿತಿ ಮೀರುತ್ತಿದ್ದು ಆತಂಕವಾಗಿದೆ. ಪಂಜಾಬ್, ಕೆರಳ, ತಮಿಳುನಾಡು, ಹರಿಯಾಣ, ಪಶ್ಚಿಮ ಬಂಗಾಳ ಮಾದರಿಯಲ್ಲಿ ರಾಜ್ಯದಲ್ಲಿ ಸೇವಾ ಭದ್ರತೆ, 35 ಸಾವಿರ ರೂ. ಮಾಸಿಕ ಗೌರವ ಧನ ನೀಡಬೇಕು. ಸೇವಾ ವಿಲೀನ ಅಥವಾ ಸೇವಾ ಭದ್ರತೆ ಒದಗಿಸಲು ಅಧಿವೇಶನದಲ್ಲಿ ಚರ್ಚಿಸಿ ತೀರ್ಮಾನಿಸಬೇಕು. ಉದಾಸೀನ ತೋರಿದಲ್ಲಿ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಲಾಯಿತು. ಅಧ್ಯಕ್ಷ ಕೆ.ಶಿವಕುಮಾರ್, ಪದಾಧಿಕಾರಿಗಳಾದ ಗಜೇಂದ್ರ, ಎಚ್.ಮಲ್ಲಿಕಾರ್ಜುನ, ಬಿ.ಮಂಜುನಾಥ, ಅಕ್ಕಿ ಮಂಜುನಾಥ, ಉತ್ತಮ್ಕುಮಾರ್, ಮೈನುದ್ದೀನ್ ಬಾಷ ಇದ್ದರು.