ವಿಜಯವಾಣಿ ಸುದ್ದಿಜಾಲ ಗದಗ
ಈಗ ನಡೆಯುತ್ತಿರುವುದು ದೇಶದ ಚುನಾವಣೆ ಆಗಿರುವುದರಿಂದ ದೇಶದ ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಬಿಜೆಪಿಗೆ ಮತ ನೀಡಬೇಕು ಎಂದು ಅನಿಲ ಮೆಣಸಿನಕಾಯಿ ಮಾತನಾಡಿದರು.
ನಗರದ ಕಾಳು ಮಾರುಕಟ್ಟೆ ಮತ್ತು ಕಾಯಿಪಲ್ಲೆ ಮಾರುಕಟ್ಟೆಯಲ್ಲಿ ಬಸವರಾಜ ಬೊಮ್ಮಾಯಿ ಪರ ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಪ್ರಚಾರ ನಡೆಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಯಾರು ದೇಶಭಕ್ತರಿದ್ದಾರೆ?. ಅವರು ದೇಶದ ಹಿತದೃಷ್ಟಿಯಿಂದ ಬಿಜೆಪಿಗೆ ಮತ ಹಾಕಬೇಕು. ಸಾಮಾನ್ಯ ಜನರ ಅಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಸರ್ಕಾರ ಹಲವು ಸಾಲಸೌಲಭ್ಯ ಯೋಜನೆಗಳನ್ನು ಜಾರಿ ಮಾಡಿದೆ. ಸಾಮಾನ್ಯರ ಬದುಕು ಹಸನು ಮಾಡಲು ಬಿಜೆಪಿ ಸರ್ಕಾರವೇ ಸೂಕ್ತ ಸರ್ಕಾರ. ಕೊವಿಡ್ ಸಂದರ್ಭದಲ್ಲಿ ಮೋದಿಯವರು ಎಲ್ಲರಿಗೂ ಲಸಿಕೆ ಕೊಡಿಸಿದರು. ಲಸಿಕೆ ಹಾಕಿಸಿದವರ ಋಣ ತೀರಿಸುವುದು ನಮ್ಮ ಧರ್ಮ. ಅವರ ಋಣ ತೀರಿಸಲು ಬಿಜೆಪಿಗೆ ಮತ ಹಾಕಬೇಕು. ಇದು ದೇಶದ ಭದ್ರತೆ, ಸುರಕ್ಷತೆಯ ಚುನಾವಣೆ ಇದನ್ನು ಮನೆ ಮನೆಗೆ ಹೋಗಿ ತಿಳಿಸಬೇಕು ಎಂದರು.
ನಗರದ ಬೆಟಗೇರಿ ಭಾಗದಲ್ಲಿ ಪ್ರಚಾರ ನಡೆಸಿದ ಅನಿಲ ಮೆಣಸಿನಕಾಯಿ, ಗದಗ ಬೆಟಗೇರಿಯಲ್ಲಿ ನೇಕಾರ ಸಮುದಾಯ ಹೆಚ್ಚಾಗಿದೆ. ನೇಕಾರರ ಸಮಸ್ಯೆಗಳು ಅಭ್ಯಥಿರ್ ಬೊಮ್ಮಾಯಿ ಅವರಿಗೆ ಗೊತ್ತಿದೆ.ಬೊಮ್ಮಾಯಿ ಅವರು ನೇಕಾರ ಸಮ್ಮಾನ್ ಯೋಜನೆ ಜಾರಿ ಮಾಡಿದರು. ನೇಕಾರರಿಗೆ 50 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡಿದರು. ಬೆಟಗೇರಿಯಲ್ಲಿ ಬೃಹತ್ ನೇಕಾರರ ಹಬ್ ಮಾಡುವ ಕನಸನ್ನು ಬೊಮ್ಮಾಯೊ ಹೊಂದಿದ್ದಾರೆ. ಬೊಮ್ಮಾಯಿ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ನೇಕಾರರ ಮಕ್ಕಳಿಗಾಗಿ ವಿದ್ಯಾನಿಧಿ ಯೋಜನೆ ಜಾರಿ ಮಾಡಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ವಿದ್ಯಾನಿಧಿ ಯೋಜನೆ ಸ್ಥಗಿತ ಗೊಳಿಸಿದರು. ಕಾಂಗ್ರೆಸ್ ನೇಕಾರರಿಗೆ ಮಾಡಿದ ಅನ್ಯಾಯ ಇದಲ್ಲವೇ ಎಂದು ಪ್ರಶ್ನಿಸಿದರು.
ರಾಜು ಕುರಡಗಿ, ಅನಿಲ ಅಬ್ಬಿಗೇರಿ, ರಾವೇಂದ್ರ ಯಳವತ್ತಿ, ಉಷಾ ದಾಸರ ಇತರರು ಇದ್ದರು.