More

    ಕಂಬಳ ಆರಂಭ ಮೂರು ವಾರ ಮುಂದಕ್ಕೆ, ನ.26ರಂದು ಕಕ್ಯಪದವಿನಲ್ಲಿ ಮೊದಲ ಕಂಬಳ

    ಮಂಗಳೂರು: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಬಿಡುಗಡೆಗೊಳಿಸಿದ್ದ ವೇಳಾಪಟ್ಟಿಯಂತೆ ಇದೇ ವಾರ ಶಿರ್ವದಲ್ಲಿ ಜೋಡುಕರೆ ಕಂಬಳ ವಿಧ್ಯುಕ್ತವಾಗಿ ಆರಂಭಗೊಳ್ಳಬೇಕಿತ್ತು. ವೇಳಾಪಟ್ಟಿ ಮತ್ತೆ ಬದಲಾವಣೆ ಕಂಡಿದ್ದು, ನ.26ರಂದು ಕಕ್ಯಪದವು ಸತ್ಯಧರ್ಮ ಜೋಡುಕರೆ ಕಂಬಳದೊಂದಿಗೆ ಈ ಸಾಲಿನ ಕಂಬಳಗಳಿಗೆ ಚಾಲನೆ ದೊರಕಲಿದೆ.

    ಈ ಋತುವಿನ ಮೊದಲ ಮೂರು ಕಂಬಳಗಳು (ನ.5- ಶಿರ್ವ, ನ.12- ಪಿಲಿಕುಳ, ನ.19- ಪಜೀರು) ಮುಂದೂಡಲ್ಪಟ್ಟಿರುವುದರಿಂದ ಕಂಬಳ ಆರಂಭ ಮೂರು ವಾರ ವಿಳಂಬವಾಗಲಿದೆ. ಇದರೊಂದಿಗೆ ಒಟ್ಟು ಕಂಬಳಗಳ ಸಂಖ್ಯೆ 24ರಿಂದ 21ಕ್ಕೆ ಇಳಿಕೆಯಾಗಲಿದೆ.

    ಸಾಂಪ್ರದಾಯಿಕ ಕಂಬಳವಾಗಿರುವ ಶಿರ್ವ ಕಂಬಳ ಹಗಲು ಮಾತ್ರ ನಡೆಯುತ್ತದೆ. ಈ ಬಾರಿ ಗದ್ದೆಯಲ್ಲಿ ಭತ್ತ ನಾಟಿ ವಿಳಂಬವಾಗಿ, ಮಳೆಯ ನಡುವೆ ಕಟಾವು ಇನ್ನಷ್ಟೇ ನಡೆಯಬೇಕಿರುವುದರಿಂದ ಶಿರ್ವ ಕಂಬಳವನ್ನು ಒಂದು ತಿಂಗಳು ಮುಂದೂಡಲಾಗಿದ್ದು, ಡಿ.13ರಂದು ಮಂಗಳವಾರ ನಡೆಯಲಿದೆ.

    ನ.19ರಂದು ನಿಗದಿಯಾಗಿದ್ದ ಪಜೀರು ಕಂಬಳ ಕರೆಗೆ ಮೊನ್ನೆಯಷ್ಟೇ ಶಿಲಾನ್ಯಾಸ ನಡೆದಿದೆ. ಕರೆ ಇನ್ನಷ್ಟೇ ಸಿದ್ಧವಾಗಬೇಕಿರುವುದರಿಂದ ಹೊಸ ದಿನಾಂಕ ನೀಡಲಾಗಿಲ್ಲ. ಈ ನಡುವೆ, ಈ ಪ್ರದೇಶದ ಮೂರ್ನಾಲ್ಕು ಕಂಬಳ ಸಮಿತಿಗಳು ಸೇರಿಕೊಂಡು ಈ ಬಾರಿ ಪಜೀರಿನಲ್ಲಿ ಕಂಬಳ ನಡೆಸುವ ಮಾತುಕತೆಯೂ ನಡೆಯುತ್ತಿದೆ.

    ಕಟಪಾಡಿ, ಜೆಪ್ಪು ಸಹಿತ ಇತರ ಕೆಲವು ಕಂಬಳಗಳ ದಿನಾಂಕಗಳಲ್ಲೂ ಸಣ್ಣಪುಟ್ಟ ಬದಲಾವಣೆಯಾಗಿದೆ. ಇಂತಹ ದಿನಾಂಕ ಹೊಂದಾಣಿಕೆ ಮುಂದೆಯೂ ನಡೆಯಬಹುದು ಎಂದು ಸಮಿತಿ ಅಧ್ಯಕ್ಷ ಎರ್ಮಾಳು ರೋಹಿತ್ ಹೆಗ್ಡೆ ತಿಳಿಸಿದ್ದಾರೆ.

    ಪಿಲಿಕುಳ ಕಂಬಳ ಡೌಟ್:
    ಕಂಬಳ ಸಮಿತಿಯು ಪಿಲಿಕುಳ ಕಂಬಳಕ್ಕೆ ನ.12ರ ದಿನಾಂಕ ನೀಡಿತ್ತು. ಆದರೆ ಕರೆ ಸಿದ್ಧತೆ ಕೆಲಸವೇ ಆರಂಭಗೊಂಡಿಲ್ಲ. ಈ ನಡುವೆ, ‘ಈ ಬಾರಿ ಕಂಬಳ ಮಾಡೋಣ’ ಎಂದು ಆಸಕ್ತಿ ತೋರಿಸಿದ್ದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ವರ್ಗಾವಣೆಗೊಂಡಿದ್ದಾರೆ. ಹೊಸ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಇನ್ನಷ್ಟೇ ಅಧಿಕಾರ ವಹಿಸಿಕೊಳ್ಳಬೇಕಿದೆ. ಹೀಗಾಗಿ ಪಿಲಿಕುಳದಲ್ಲಿ ಈ ಬಾರಿಯೂ ಕಂಬಳ ನಡೆಯುವ ಸಾಧ್ಯತೆ ಗೋಚರಿಸುತ್ತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts