ಕಳಸ: ಕಳಸ- ಕೊಟ್ಟಿಗೆಹಾರದ ಮುಖ್ಯ ರಸ್ತೆಯ ಕಲ್ಮಕ್ಕಿ ತಿರುವಿನಲ್ಲಿ ವಾರದ ಹಿಂದೆ ನಿರ್ವಹಿಸಿದ್ದ ಡಾಂಬರೀಕರಣ ಕಾಮಗಾರಿಯ ಅಸಲಿಯತ್ತು ಬಯಲಾಗಿದೆ.
ಪಿಡಬ್ಲ್ಯುಡಿ ಇಲಾಖೆಯಿಂದ ಶಿಥಿಲಗೊಂಡ ರಸ್ತೆಯ ಹೊಂಡ, ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಲಾಗುತ್ತಿತ್ತು. ಎರಡು ವರ್ಷಗಳ ಹಿಂದೆ ಉಂಟಾದ ಪ್ರವಾಹದಲ್ಲಿ ಕಲ್ಮಕ್ಕಿ ತಿರುವಿನಲ್ಲಿ ರಸ್ತೆ ಸಂಪೂರ್ಣ ಕಿತ್ತು ಹೋಗಿತ್ತು. ಅಲ್ಲಿ ಒಂದು ವಾರದ ಹಿಂದೆ ಡಾಂಬರೀಕರಣ ಮಾಡಲಾಗಿತ್ತು. ಮೂರ್ನಾಲ್ಕು ದಿನಗಳಿಂದ ಡಾಂಬರು ಡಾಂಬಾರು ಕಿತ್ತು, ಜಲ್ಲಿ ಕಲ್ಲುಗಳು ಮೇಲೆ ಬರುತ್ತಿವೆ. ರಸ್ತೆ ಮೊದಲಿನ ಸ್ಥಿತಿಗೆ ಬಂದಿದೆ.
ಅತ್ಯಂತ ಕಿರಿದಾದ ಮತ್ತು ತಿರುವಿನಿಂದ ಕೂಡಿರುವ ಸ್ಥಳವಾದ್ದರಿಂದ ಹಲವು ಬೈಕ್ ಸವಾರರು ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ನಿವಾಸಿ ಅಶೋಕ್ ಎಂಬುವರು ರಸ್ತೆಯ ಒಂದು ಬದಿಯಲ್ಲಿ ಬಿದ್ದಿದ್ದ ಜಲ್ಲಿ ತೆರವುಗೊಳಿಸಿ ಸವಾರರಿಗೆ ಓಡಾಡಲು ಅನುವು ಮಾಡಿಕೊಟ್ಟಿದ್ದರು.
ಬುಧವಾರ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಕಾಮಗಾರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇಲಾಖೆ ಈ ರೀತಿ ಕಾಮಗಾರಿ ಮಾಡಿ ಸರ್ಕಾರಕ್ಕೆ ನಷ್ಟ ಮಾಡುತ್ತಿದೆ. ಕಾಮಗಾರಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕೂಡಲೇ ಮರು ಡಾಂಬರೀಕರಣ ಮಾಡಬೇಕು ಎಂದು ಗ್ರಾಮಸ್ಥರಾದ ವೆಂಕಟೇಶ್, ಅಶೋಕ, ವಸಂತ, ಅನಂತು, ಸುವರ್ಣ ಭಟ್ ಇತರರು ಒತ್ತಾಯಿಸಿದ್ದರು.
ಕಲ್ಮಕ್ಕಿ ತಿರುವಿನಲ್ಲಿ ಇತ್ತೀಚೆಗೆ ವಾಲ್ ಕಟ್ಟಿ ಮಣ್ಣು ತುಂಬಿಸಲಾಗಿತ್ತು. ಜಲ್ಲಿ ಹಾಕಿ ಅದು ಸೆಟ್ ಆಗಿ ಎರಡು ತಿಂಗಳ ನಂತರ ಡಾಂಬರು ಹಾಕಬೇಕಿತ್ತು. ಆದರೆ ತಕ್ಷಣ ಡಾಂಬರೀಕರಣ ಮಾಡಿದ ಪರಿಣಾಮ ಜಲ್ಲಿ ಕಲ್ಲುಗಳು ಮೇಲೆ ಬರುತ್ತಿವೆ. ಇನ್ನೆರಡು ದಿನದಲ್ಲಿ ರಸ್ತೆಯನ್ನು ಸಂಪೂರ್ಣ ಕಿತ್ತು, ಜಲ್ಲಿ ಹಾಕಿಸಲಾಗುವುದು. ಎರಡು ತಿಂಗಳು ಕಳೆದ ಮೇಲೆ ಡಾಂಬರೀಕರಣ ಮಾಡಿಸುತ್ತೇನೆ ಎಂದು ಪಿಡಬ್ಲ್ಯುಡಿ ಇಂಜಿನಿಯರ್ ಮಂಜುನಾಥ್ ಭರವಸೆ ನೀಡಿದ್ದಾರೆ.