More

    ಶ್ರದ್ಧಾಭಕ್ತಿಯಿಂದ ನಡೆದ ‘ಹರಿಸೇವೆ’

    ಕಲಾದಗಿ: ತುಳಸಿಗೇರಿ ಹನುಮಂತ ದೇವರ ಕಾರ್ತಿಕೋತ್ಸವ ನಿಮಿತ್ತ ನಡೆಯುವ ಗೋಪಾಳ ತುಂಬಿಸುವ ಹಾಗೂ ಭಕ್ತರಿಗೆ ವಿಶೇಷವಾದ ‘ಕಿಚಡಿ’ ಪ್ರಸಾದವನ್ನು ನೀಡುವ ‘ಹರಿಸೇವೆ’ ಭಾನುವಾರ ಸಂಜೆ ಸೀಮಿತ ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.

    ದೇವಾಲಯದ ಪೂಜಾರರು, 9 ಜನ ದೇವಾಲಯ ಸೇವಕ ಮನೆತನದವರ ಸಮ್ಮುಖದಲ್ಲಿ ಸಂಪ್ರದಾಯದಂತೆ 12 ದೇವರಿಗೆ ಕಿಚಡಿಯ ನೈವೇದ್ಯ, ಮಹಾಮಂಗಳಾರತಿ, ಗೋವಿಂದನ ನಾಮಸ್ಮರಣೆಗಳು ನಡೆದವು. ನಂತರ ಸಾಲಿನಲ್ಲಿದ್ದ ಗೋಪಾಳವನ್ನು ತುಂಬಿಸಲಾಯಿತು. ಸಾಲು ಹಿಡಿದು ಕುಳಿತ ಭಕ್ತರಿಗೆ ಪರಂಪರೆಯಂತೆ ಕುಂದರಗಿ ಗ್ರಾಮದ ತಿಪ್ಪಣ್ಣ ಕುಂಬಾರ ಮನೆತನದವರು ತಯಾರಿಸಿಕೊಂಡು ತಂದಿದ್ದ ಕಿಚಡಿ ಪ್ರಸಾದವನ್ನು ನೀಡಲಾಯಿತು.

    ಕಿಚಡಿ ಪ್ರಸಾದದ ಮಹತ್ವ
    ಕಿಚಡಿ ಪ್ರಸಾದಕ್ಕೆ ಅದರದೆ ಆದ ಮಹತ್ವವಿದೆ. ಕಿಚಿಡಿ ಪ್ರಸಾದಕ್ಕೆಂದು ನಾನಾ ಕಡೆಗಳಿಂದ ಅನೇಕ ಭಕ್ತರು ಬರುತ್ತಾರೆ. ಈ ಪ್ರಸಾದವನ್ನು ಅಲ್ಲೊಂದಿಷ್ಟು ಸೇವಿಸಿ ಇನ್ನಷ್ಟನ್ನು ಮನೆಗೆ ಒಯ್ದು ಅದನ್ನು ತಮ್ಮ ಕೃಷಿಭೂಮಿಯಲ್ಲಿ ಎರಚುತ್ತಾರೆ. ಇದರಿಂದ ಭೂಮಿಯಲ್ಲಿ ಉತ್ತಮ ಬೆಳೆ ಬರುತ್ತದೆ ಎಂಬ ನಂಬಿಕೆ ಜನರದ್ದು.

    ಕಾಣದ ಭಕ್ತರ ಸಮೂಹ
    ಜಿಲ್ಲಾಡಳಿತ ಹನುಮಂತದೇವರ ಜಾತ್ರೋತ್ಸವವನ್ನು ನಿಷೇಧಿಸಿದ್ದ ಹಿನ್ನೆಲೆಯಲ್ಲಿ ‘ಹರಿಸೇವೆ’ಗೆ ಪ್ರತಿವರ್ಷ ಕಾಣುತ್ತಿದ್ದಂತೆ ಹೆಚ್ಚಿನ ಭಕ್ತರ ಸಂಖ್ಯೆ ಕಾಣಲಿಲ್ಲ. ಶನಿವಾರ ಬೆಳಗಿನ ಜಾವ ನಡೆದ ಕಾರ್ತಿಕ ದೀಪ ಹಚ್ಚುವ ಕಾರ್ಯಕ್ರಮದಲ್ಲಿಯೂ ಹೆಚ್ಚಿನ ಸಂಖ್ಯೆಯಲ್ಲಿ ಹೊರಗಿನ ಭಕ್ತರು ಕಾಣಲಿಲ್ಲ.

    ಇಂದು ಕಾರ್ತಿಕೋತ್ಸವ ಸಂಪನ್ನ
    ಅಸಂಖ್ಯಾತ ಭಕ್ತರ ಆರಾದ್ಯ ದೈವ ತುಳಸಿಗೇರಿ ಹನುಮಂತ ದೇವರ ಕಾರ್ತಿಕೋತ್ಸವ ಜ.4 ರಂದು ಗ್ರಾಮದಲ್ಲಿ ಪಲ್ಲಕ್ಕಿ ಮಹೋತ್ಸವ ನಡೆಯುವುದರೊಂದಿಗೆ ಸಂಪನ್ನವಾಗಲಿದೆ. ಬೆಳಗ್ಗೆ 11 ಗಂಟೆಯಿಂದ ಗ್ರಾಮದ ಕೊತ್ತಲೇಶ್ವರ ಗುಡಿಯಿಂದ ಆರಂಭವಾಗುವ ಪಲ್ಲಕ್ಕಿ ಮಹೋತ್ಸವ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ‘ಮನೆಸ್ವಾಮಿ’ ದೇವಸ್ಥಾನದಲ್ಲಿ ಸಮಾಪನಗೊಳ್ಳುವುದು. ಪಲ್ಲಕ್ಕಿ ಮಹೋತ್ಸವದಲ್ಲಿ ಭಕ್ತ ಸಮೂಹ ಪಲ್ಲಕ್ಕಿಯತ್ತ ಬೆಂಡು ಬೆತ್ತಾಸ ಹಾಗೂ ಕಲ್ಲು ಸಕ್ಕರೆಯನ್ನು ತೂರುವುದು ವಿಶೇಷವಾಗಿದೆ.

    ತುಳಸಿಗೇರೆಪ್ಪನ ಆಕರ್ಷಣೆ
    ನೀರಬೂದಿಹಾಳ ದೇಸಾಯಿ ಮನೆತನದವರು ತುಳಸಿಗೇರಿ ಹನುಮಂತ ದೇವರಿಗೆ ಕಳೆದ ವರ್ಷ ಸಮರ್ಪಿಸಿರುವ ದೇವರ ಕುದುರೆ ‘ತುಳಸಿಗೇರೆಪ್ಪ’ ಈ ಬಾರಿಯೂ ಪಲ್ಲಕ್ಕಿ ಮಹೋತ್ಸವದ ಮುಂಚೂಣಿಯಲ್ಲಿ ಹೆಜ್ಜೆಹಾಕುವುದರೊಂದಿಗೆ ಭಕ್ತರ ಆಕರ್ಷಣೆಯಾಗಲಿದೆ.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts