ಕಲಾದಗಿ: ಗ್ರಾಮದ ಜನರ ಸಮಸ್ಯೆಗಳ ಆಲಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿಗಾಗಿ ಅವಲೋಕನ ಮಾಡಲು ಮಾ.20 ರಂದು ಕಲಾದಗಿ ಸಮೀಪದ ತುಳಸಿಗೇರಿಯಲ್ಲಿ ಜಿಲ್ಲಾಧಿಕಾರಿ ಹಾಗೂ ಇನ್ನಿತರ ಇಲಾಖೆ ಅಧಿಕಾರಿಗಳು ಗ್ರಾಮವಾಸ್ತವ್ಯ ಮಾಡುವರು ಎಂದು ಬಾಗಲಕೋಟೆ ತಹಸೀಲ್ದಾರ್ ಜಿ.ಎಸ್. ಹಿರೇಮಠ ಹೇಳಿದರು.
ಅಧಿಕಾರಿಗಳ ಗ್ರಾಮ ವಾಸ್ತವ್ಯ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ತುಳಸಿಗೇರಿ ಹಳೇ ಪಂಚಾಯಿತಿ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಮಾ.20 ರಂದು ಗ್ರಾಮಸ್ಥರೆಲ್ಲರೂ ಗ್ರಾಮದಲ್ಲಿದ್ದು, ಅಧಿಕಾರಿಗಳಿಗೆ ತಮ್ಮ ಸಮಸ್ಯೆಗಳನ್ನು ತಿಳಿಸಿ ಪರಿಹರಿಸಿಕೊಳ್ಳಬೇಕು ಎಂದ ಅವರು, ಬೆಳಗ್ಗೆ 11 ಗಂಟೆಯಿಂದ ಇಡೀ ದಿನ ಜಿಲ್ಲಾಧಿಕಾರಿ ಹಾಗೂ ಇತರ ಅಧಿಕಾರಿಗಳ ಕಾರ್ಯಕ್ರಮಗಳ ರೂಪುರೇಷೆ ವಿವರಿಸಿದರು.
ಗ್ರಾಪಂ ಅಧ್ಯಕ್ಷೆ ಮಂಜುಳಾ ಭಂಗಿ, ಉಪಾಧ್ಯಕ್ಷ ಮಂಜುಗೌಡ ಪಾಟೀಲ, ಗ್ರಾಮದ ಪ್ರಮುಖ ರಾಮಣ್ಣ ರೂಗಿ, ತಾಪಂ ಇಒ ಎನ್.ವೈ. ಬಸರಿಗಿಡದ, ಪಿಡಿಒ ಸ್ವಪ್ನಾ ನಾಯಕ ಇನ್ನಿತರರು ವೇದಿಕೆಯಲ್ಲಿದ್ದರು.
ಪೂರ್ವಭಾವಿ ಸಭೆಗೂ ಮುನ್ನ ತಹಸೀಲ್ದಾರ್ ಜಿ.ಎಸ್. ಹಿರೇಮಠ ಅವರು ಅಧಿಕಾರಿಗಳೊಂದಿಗೆ ಗ್ರಾಮದ ವಿವಿಧ ಓಣಿಗಳಲ್ಲಿ ಸಂಚರಿಸಿ ಪರಿಶೀಲಿಸಿದರು. ಜಿಲ್ಲಾಧಿಕಾರಿ ಭೇಟಿ ನೀಡಲಿರುವ ಊರಿನ ಅಂಗನವಾಡಿ, ಗರಡಿಮನೆ, ಗ್ರಂಥಾಲಯ, ಜಿಮ್ ಮುಂತಾದ ಸ್ಥಳಗಳನ್ನು ಪರಿಶೀಲಿಸಿದರು.