ಕಲಾದಗಿ: ಅರ್ಜಿ ಸಲ್ಲಿಸಿದ ರಾಜ್ಯದ ಎಲ್ಲ ಪಡಿತರದಾರರಿಗೂ ಉಚಿತವಾಗಿ ರೇಷನ್ ವಿತರಿಸಬೇಕೆಂದು ಸಚಿವ ಸಂಪುಟದಲ್ಲಿ ನಿರ್ಧಾರವಾಗಿ ತಿಂಗಳಾದರೂ ಈವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಈ ಕುರಿತು ಕೂಡಲೇ ಸರ್ಕಾರ ಕ್ರಮ ಕೈಗೊಂಡು ರೇಷನ್ ವಿತರಿಸಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಎಸ್.ಆರ್. ಪಾಟೀಲ ಆಗ್ರಹಿಸಿದರು.
ಗ್ರಾಮಕ್ಕೆ ಗೋವಾದಿಂದ ಬಂದಿರುವ 18 ಕುಟುಂಬಗಳಿಗೆ ಹಾಗೂ ಪಡಿತರ ಚೀಟಿಯಿಲ್ಲದ 30ಕ್ಕೂ ಅಧಿಕ ಕುಟುಂಬಗಳಿಗೆ ಕಾಂಗ್ರೆಸ್ ಮುಖಂಡ ನಾರಾಯಣ ಹಾದಿಮನಿ ಕೊಡ ಮಾಡಿದ ಆಹಾರಧಾನ್ಯ, ತರಕಾರಿ ಕಿಟ್ ಹಾಗೂ ಬಾಗಲಕೋಟೆಯ ಶಾಂತಿ ಆಸ್ಪತ್ರೆಯವರು ನೀಡಿದ ಮಾಸ್ಕ್ನ್ನು ಗ್ರಾಮದ ಹಣ್ಣು ಬೆಳೆಗಾರರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿತರಿಸಿ ಮಾತನಾಡಿದರು.
ಹೊರ ರಾಜ್ಯದಲ್ಲಿರುವ ಕನ್ನಡಿಗರನ್ನು ಸರ್ಕಾರದ ವೆಚ್ಚದಲ್ಲಿಯೇ ಅವರವರ ಊರಿಗೆ ಕರೆತರುವ ಕೆಲಸವಾಗಬೇಕು. ಕಂಟೇನ್ಮೆಂಟ್ ಪ್ರದೇಶದಲ್ಲಿರುವ ರೈತರು, ಕೂಲಿ ಕಾರ್ಮಿಕರು, ವ್ಯಾಪಾರಸ್ಥರು ಸ್ಥಿತಿ ಹೇಳತೀರದಾಗಿದೆ. ಅವರ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜನರೇ ಸರ್ಕಾರದ ವಿರುದ್ಧ ದಂಗೆ ಏಳಲಿದ್ದಾರೆ. ಕಾಂಗ್ರೆಸ್ ಸಹ ತೀವ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದರು.
ಮಾಜಿ ಶಾಸಕ ಜೆ.ಟಿ. ಪಾಟೀಲ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ, ಕರೊನಾ ತಡೆಗಟ್ಟುವಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಕೋವಿಡ್ ವಾರಿಯರ್ಸ್ ಕಾರ್ಯ ಸ್ಮರಣೀಯ. ಜನತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಬಿ. ಸೌದಾಗರ, ತಾಪಂ ಸದಸ್ಯರಾದ ಸಂಗಣ್ಣ ಮುಧೋಳ, ಸಲೀಂ ಶೇಖ, ಗ್ರಾಪಂ ಅಧ್ಯಕ್ಷೆ ತಾರಾಮತಿ ಪಾಟೀಲ ಮುಂತಾದವರು ಇದ್ದರು.