ಕಲಬುರಗಿ: ಕರೊನಾ ಲಾಕ್ಡೌನ್ ನಡುವೆಯೂ ಹುಡುಗಿ ವಿಚಾರಕ್ಕೆ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ ನಗರದ ಮಾಂಗವಾಡಿ ಏರಿಯಾದಲ್ಲಿ ನಡೆದಿದೆ.
ಚಿರಂಜೀವಿ ಅಲಿಯಾಸ್ ಚೀರು(21) ಕೊಲೆಯಾದ ಯುವಕ. ಹುಡಗಿ ವಿಚಾರದಲ್ಲಿ ಗಲಾಟೆ ತೆಗೆದು ಏಳು ಜನ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ನಿನ್ನೆ ತಡರಾತ್ರಿ ಘಟನೆ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಚಿರಂಜೀವಿ ಮೃತಪಟ್ಟಿದ್ದಾನೆ.
ಘಟನೆ ಸಂಬಂಧ ಸದ್ಯ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬಂಧಿತರನ್ನು ಕಾಶಿನಾಥ್ , ವಿಶ್ವನಾಥ್ , ರಘುನಾಥ್ ಹಾಗೂ ಮೋಹನ್ ಎಂದು ಗುರುತಿಸಲಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ನಡೆಯುತ್ತಿದ್ದು, ಬಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿಯು ಕರೊನಾ ವೈರಸ್ ಹಾಟ್ಸ್ಪಾಟ್ ಆಗಿದ್ದು, ಜನರು ಭಯಭೀತಿಯಲ್ಲಿರುವ ಸಮಯದಲ್ಲೇ ದುಷ್ಕರ್ಮಿಗಳ ಪುಂಡಾಟಕ್ಕೆ ಜನರು ಮತ್ತಷ್ಟು ಭಯಬೀಳುವಂತಾಗಿದೆ. (ದಿಗ್ವಿಜಯ ನ್ಯೂಸ್)
ಲಾಕ್ಡೌನ್ ನಿಯಮ ಪಾಲನೆಗೆ ಪ್ರಯತ್ನಿಸಿದ ಪೊಲೀಸರ ಮೇಲೆ ಗುಂಪು ದಾಳಿ: ಮೂವರು ಪೊಲೀಸರಿಗೆ ಗಾಯ