ಕಲಬುರಗಿ: ಚಿತ್ತಾಪುರ ತಾಲೂಕಿನ ರಾವೂರದಲ್ಲಿ ಸಿದ್ಧಲಿಂಗೇಶ್ವರ ರಥೋತ್ಸವ ನಡೆಸಿದ ಹಿನ್ನೆಲೆಯಲ್ಲಿ ಶನಿವಾರ ದೇವಸ್ಥಾನ ಕಮಿಟಿ ಕಾರ್ಯದರ್ಶಿ ಗುಂಡಣ್ಣ ಬಾಳಿ ಸೇರಿ ಎಂಟು ಜನರನ್ನು ಬಂಧಿಸಲಾಗಿದೆ.
ಶುಕ್ರವಾರ ಐವರು, ಶನಿವಾರ ಎಂಟು ಜನ ಸೇರಿ ಬಂಧಿತರ ಸಂಖ್ಯೆ 13ಕ್ಕೆ ಏರಿದೆ. ಈ ಮಧ್ಯೆ ಗ್ರಾಮಕ್ಕೆ ಜಿಲ್ಲಾಧಿಕಾರಿಯೂ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಇಡೀ ಗ್ರಾಮವವನ್ನು ಸೀಲ್ಡೌನ್ ಮಾಡಲಾಗಿದೆ.
ಗ್ರಾಮಸ್ಥರನ್ನು ಕ್ವಾರಂಟೈನ್ ಮಾಡಲಾಗಿದ್ದು, ಯಾರೊಬ್ಬರನ್ನು ಹೊರಬರಲು, ಬೇರೆಯವರು ಗ್ರಾಮಕ್ಕೆ ಹೋಗಲು ಬಿಡುತ್ತಿಲ್ಲ. ರಾವೂರ ಗ್ರಾಮ ಕರೊನಾ ಪಾಸಿಟಿವ್ ಕೇಸ್ಗಳು ಬೆಳಕಿಗೆ ಬಂದಿರುವ ಶಹಾಬಾದ್ ಮತ್ತು ವಾಡಿ ಪಟ್ಟಣಕ್ಕೆ ಸಮೀಪದಲ್ಲಿದೆ.
ಈ ಮಧ್ಯೆ, ಆಳಂದ ತಾಲೂಕಿನ ಭೂಸನೂರ ಗ್ರಾಮದಲ್ಲಿಯೂ ಲಾಕ್ಡೌನ್ ನಿಯಮ ಉಲ್ಲಂಸಿ ಹನುಮಾನ ದೇವರ ರಥೋತ್ಸವ ನೆರವೇರಿಸಿರುವುದು ಬೆಳಕಿಗೆ ಬಂದಿದೆ.
ಕರೊನಾ ಹಿನ್ನೆಲೆಯಲ್ಲಿ ಜಾತ್ರೆ, ಉತ್ಸವಗಳನ್ನು ಜಿಲ್ಲಾಡಳಿತ ನಿಷೇಧಿಸಿದ್ದರೂ ಏ. 16ರಂದು ಭೂಸನೂರದಲ್ಲಿ ಹನುಮಂತ ದೇವರ ತೇರು ಎಳೆದಿರುವುದು ಸ್ಪಷ್ಟವಾಗಿದೆ. ರಥೋತ್ಸವ ವೇಳೆ ಜನರು ಸೇರಿದ್ದರಿಂದ ಗ್ರಾಮಸ್ಥರಲ್ಲಿ ಕರೊನಾ ಭೀತಿ ಕಾಡುತ್ತಿದೆ.
ವಿಷಯ ತಿಳಿಯುತ್ತಿದ್ದಂತೆ ಶನಿವಾರ ಊರಿಗೆ ದೌಡಾಯಿಸಿದ ಪೊಲೀಸರು, ಜನರಿಂದ ಮಾಹಿತಿ ಕಲೆ ಹಾಕಿದರು. ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದು, ವಿಡಿಯೋ ದೃಶ್ಯಗಳನ್ನು ಸಹ ಪರಿಶೀಲಿಸುತ್ತಿದ್ದಾರೆ. ಜಿಲ್ಲಾಡಳಿತ ಎಲ್ಲ ಗ್ರಾಮಸ್ಥರನ್ನು ಕ್ವಾರಂಟೈನ್ ಮಾಡುವ ಮೂಲಕ ಆರೋಗ್ಯ ತಪಾಸಣೆಗೆ ಮುಂದಾಗಿದೆ.
ಕಾಶ್ಮೀರದ ಬಾರಾಮುಲ್ಲಾದ ಸಿಆರ್ಪಿಎಫ್ ಯೋಧರಿದ್ದ ವಾಹನದ ಮೇಲೆ ಉಗ್ರರ ದಾಳಿ, ಮೂವರು ಯೋಧರು ಹುತಾತ್ಮ
VIDEO| ಮಗಳೊಂದಿಗೆ ಸೇರಿ ಕತ್ರಿನಾ ಕೈಫ್ ಅಭಿನಯದ ಶೀಲಾ ಕಿ ಜವಾನಿ ಹಾಡಿಗೆ ಹೆಜ್ಜೆ ಹಾಕಿದ ವಾರ್ನರ್!