ನವದೆಹಲಿ: ದ್ವೇಷಪೂರಿತ ಅಥವಾ ಪ್ರಚೋದನಾಕಾರಿ ಭಾಷಣಗಳ ವಿರುದ್ಧ ಎಫ್ಐಆರ್ ದಾಖಲಿಸುವಲ್ಲಿ ಎಂದಿಗೂ ವಿಳಂಬ ಮಾಡಬಾರದೆಂದು ಹೇಳುವ ಮೂಲಕ ಇಂತಹ ಪ್ರಕರಣಗಳ ವಿರುದ್ಧ ವಿಳಂಬ ಧೋರಣೆ ಅನುಸರಿಸಿದ ದೆಹಲಿ ಪೊಲೀಸರನ್ನು ದೆಹಲಿ ಹೈಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿತು.
ಸಿಎಎ ಪರ ಮತ್ತು ವಿರೋಧ ಬಣಗಳಿಂದ ಈಶಾನ್ಯ ದೆಹಲಿಯಲ್ಲಿ ಉಂಟಾದ ಗಲಭೆಯು ಹಿಂಸಾಚಾರಕ್ಕೆ ತಿರುಗಿ ಈವರೆಗೂ 23 ಮಂದಿ ಸಾವಿಗೀಡಾಗಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಿಂಸಾಚಾರದಲ್ಲಿ ಪಾಲ್ಗೊಂಡಿರುವ ಹಾಗೂ ಅದಕ್ಕೆ ಕಾರಣರಾದವರ ಮೇಲೆ ಎಫ್ಐಆರ್ ದಾಖಲಿಸಲು ತಕ್ಷಣ ವಿಚಾರಣೆ ನಡೆಸುವಂತೆ ದೆಹಲಿ ಹೈಕೋರ್ಟ್ಗೆ ಅರ್ಜಿ ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ ಬಿಜೆಪಿ ನಾಯಕರಾದ ಕಪಿಲ್ ಮಿಶ್ರಾ, ಅನುರಾಗ್ ಠಾಕೂರ್, ಅಭಯ್ ವರ್ಮಾ ಮತ್ತು ಪರ್ವೇಶ್ ವರ್ಮಾರ ಪ್ರಚೋದನಾಕಾರಿ ಭಾಷಣಗಳ ವಿಡಿಯೋವನ್ನು ಕೋರ್ಟ್ನಲ್ಲೇ ಬಹಿರಂಗವಾಗಿ ಪ್ರಸಾರ ಮಾಡಿ, ನೋಡಿದ ಬಳಿಕ ತಕ್ಷಣ ಎಫ್ಐಆರ್ ದಾಖಲಿಸಲು ತಾಕೀತು ಮಾಡಿದೆ. ಅಲ್ಲದೆ, ಇಂತಹ ಪ್ರಕರಣಗಳಲ್ಲಿ ನಿರ್ಲಕ್ಷ್ಯ ವಹಿಸಿದ ದೆಹಲಿ ಪೊಲೀಸರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತು.
ಸಾರ್ವಜನಿಕ ಆಸ್ತಿಗಳಿಗೆ ನಷ್ಟ ಉಂಟುಮಾಡಿದವರ ವಿರುದ್ಧ ಎಫ್ಐಆರ್ ದಾಖಲಿಸಲು ತೋರಿದ ಚುರುಕುತನವನ್ನು ದ್ವೇಷ ಭಾಷಣ ಮಾಡಿದವರ ಮೇಲೇಕೆ ತೋರಲಿಲ್ಲ? ಈಗಲೂ ಅಪರಾಧ ಸ್ಥಿತಿಯನ್ನು ಒಪ್ಪಲು ನೀವು ಬಯಸುವುದಿಲ್ಲವೇ? ಈ ಕ್ಷಣವೇ ಎಫ್ಐಆರ್ ದಾಖಲಿಸಿ ಎಂದು ನ್ಯಾಯಮೂರ್ತಿ ಎಸ್. ಮುರಳೀಧರ್ ನೇತೃತ್ವದ ದ್ವಿಸದಸ್ಯ ಪೀಠವು ನಿರ್ದೇಶನ ನೀಡಿದೆ.
ಕೇವಲ ಈ ವಿಡಿಯೋಗಳನ್ನು ಕುರಿತಾಗಿ ಮಾತ್ರ ಕಳವಳ ವ್ಯಕ್ತಪಡಿಸುತ್ತಿಲ್ಲ. ಪ್ರಚೋದನಾಕಾರಿ ಭಾಷಣಕ್ಕೆ ಸಂಬಂಧಿಸಿದ ಎಲ್ಲ ವಿಡಿಯೋಗಳನ್ನು ದೆಹಲಿ ಪೊಲೀಸ್ ಆಯುಕ್ತ ಅಮುಲ್ಯ ಪಟ್ನಾಯಕ್ ಗಮನಕ್ಕೆ ತರಬೇಕು. ಪಟ್ನಾಯಕ್ ಅವರು ತಕ್ಷಣವೇ ಎಫ್ಐಆರ್ ದಾಖಲಿಸಲು ಸೂಚನೆ ನೀಡಬೇಕು. ಇದನ್ನು ಮಾಡುವಾಗ ಪೊಲೀಸ್ ಆಯುಕ್ತರು ಲಲಿತಾ ಕುಮಾರಿ ಅವರ ಮಾರ್ಗಸೂಚಿಗಳನ್ನು ಖಂಡಿತವಾಗಿ ಅನುಸರಿಸಬೇಕು ಹಾಗೂ ಎಫ್ಐಆರ್ ದಾಖಲಿಸದಿದ್ದರೆ ಎದುರಾಗುವ ಪರಿಣಾಮವನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲಿ ಕಾನೂನಿಗಿಂತ ಯಾರು ದೊಡ್ಡವರಲ್ಲ ಎಂದು ನ್ಯಾಯಾಲಯ ಖಡಾಖಂಡಿತವಾಗಿ ಘೋಷಿಸಿತು.
ಇದೇ ವೇಳೆ ದೆಹಲಿ ಪೊಲೀಸ್ ಪರ ವಕೀಲ ತುಷಾರ್ ಮೆಹ್ತಾರ ಮೂಲಕ ಪೊಲೀಸ್ ಆಯುಕ್ತರಿಗೆ ಸಂದೇಶವೊಂದನ್ನು ಕಳುಹಿಸಿದ್ದು, ಈ ಪ್ರಕರಣಗಳಲ್ಲಿ ಪೊಲೀಸರ ವಿರುದ್ಧ ತುಂಬಾ ಅಸಮಾಧಾನವಿದೆ ಎಂದು ನ್ಯಾಯಾಲಯ ಹೇಳಿದೆ. (ಏಜೆನ್ಸೀಸ್)