ಬೆಳಗಾವಿ: ನಗರದ ವಿವಿಧ ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಉದ್ಯಮಬಾಗ್ ಠಾಣೆ ಪೊಲೀಸರು ಶುಕ್ರವಾರ ಇಬ್ಬರನ್ನು ಬಂಧಿಸಿ 1.5 ಲಕ್ಷ ರೂ. ಮೌಲ್ಯದ ಆಭರಣ ಮತ್ತು ಬೈಕ್ ವಶಕ್ಕೆ ಪಡೆದುಕೊಂಡಿದ್ದಾರೆ.
ರಾಜಾರಾಮ ನಗರದ ಈಶ್ವರ ಶಿವರಾಯಪ್ಪ ಉದಗಟ್ಟಿ (28), ದತ್ತ ಗಲ್ಲಿಯ ಸಂತೋಷ ಬೆಟಗೇರಿ (37) ಬಂಧಿತರು.
ಫೆ.2 4ರಂದು ಹನುಮಾನವಾಡಿಯಲ್ಲಿ ರಾಜಾರಾಮ ಕೃಷ್ಣ ಸುತಾರ ಎಂಬುವರ ಮನೆಯ ಬಾಗಿಲು ಮುರಿದು ಬಂಧಿತರು ಕಳ್ಳತನ ಮಾಡಿದ್ದರು. ಈ ಕುರಿತು ನಡೆಸಿದ ಕಾರ್ಯಾಚರಣೆ ವೇಳೆ 1.50 ಲಕ್ಷ ರೂ. ಮೌಲ್ಯದ ಬಂಗಾರದ ಮಂಗಳಸೂತ್ರ, ಕಿವಿಯೋಲೆ ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ವಶಪಡಿಸಿಕೊಳ್ಳಲಾಗಿದೆ. ಇನ್ನಿಬ್ಬರು ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉದ್ಯಮಬಾಗ್ ಪೊಲೀಸ್ ಠಾಣೆ ಪಿಐ ದಯಾನಂದ ಶೇಗುಣಸಿ, ಕಾಂತೇಶ ಸವದತ್ತಿ, ತವನಪ್ಪ ಕುಂಚನೂರ, ಮಾಳಪ್ಪ ಪೂಜಾರಿ, ಶಶಿಕುಮಾರ ಗೌಡ್ರ, ಜಗದೀಶ ಹಾದಿಮನಿ ಕಾರ್ಯಾಚರಣೆಯಲ್ಲಿದ್ದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.