ಹಾಸನ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಐತಿಹಾಸಿಕ ರಾಮಮಂದಿರಕ್ಕಾಗಿ ದೇಣಿಗೆ ಸಂಗ್ರಹ ವಿಚಾರದಲ್ಲಿ ತಕರಾರು ಎತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮಾಜಿ ಸಚಿವ ಎ. ಮಂಜು ಟಾಂಗ್ ಕೊಟ್ಟಿದ್ದಾರೆ. ಮಂದಿರಕ್ಕಾಗಿ ಹಣ ಕೇಳುವವರನ್ನು ಗೂಂಡಾಗಳು ಎಂದಿರುವ ಮಾಜಿ ಸಿಎಂ ಎಚ್ಡಿಕೆ ಹೇಳಿಕೆಯನ್ನು ಖಂಡಿಸಿರುವ ಮಂಜು, ಇದೀಗ ಎಚ್ಡಿಕೆಗೆ ಮಾತಲ್ಲೇ ಎದಿರೇಟು ನೀಡಿದ್ದಾರೆ. ಹಾಸನದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ಮಂಜು ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಭಾರತ ಇರುವುದೇ ನಮ್ಮ ಸಂಸ್ಕೃತಿ ಮೇಲೆ. ರಾಮಮಂದಿರಕ್ಕಾಗಿ ಹಣ ಕೊಡುವವರನ್ನು ಪುಂಡ-ಪೋಕರಿಗಳು ಎಂದು ಕರೆದರೆ ಚುನಾವಣೆ ಸಂದರ್ಭದಲ್ಲಿ ಒಂದು ಟಿಕೆಟ್ ಕೊಡುವುದಕ್ಕೆ ನಾಲ್ಕೈದು ಕೋಟಿ ರೂಪಾಯಿ ತೆಗೆದುಕೊಳ್ಳುವವರಿಗೆ ಏನು ಹೇಳಬೇಕು ಎಂದು ಕುಮಾರಸ್ವಾಮಿ ಅವರ ಪಕ್ಷವನ್ನೂ ಸೇರಿಸಿ ಪ್ರತ್ಯುತ್ತರ ನೀಡಿದ್ದಾರೆ. ಮಾತ್ರವಲ್ಲ ಅತಿ ಹೆಚ್ಚು ದೇಣಿಗೆ ಪಡೆದುಕೊಂಡು ಬಿ ಫಾರಂ ನೀಡುವ ಪಕ್ಷವೇ ಜೆಡಿಎಸ್ ಎಂದೂ ಮಂಜು ಹೇಳಿದ್ದಾರೆ.
ಇನ್ನು ರಾಮಮಂದಿರ ದೇಣಿಗೆ ಸಂಗ್ರಹ ಹಾಗೂ ಮಂದಿರ ನಿರ್ಮಾಣ ಸಂಬಂಧ ಆಕ್ಷೇಪ ವ್ಯಕ್ತಪಡಿಸಿರುವ ಸಿದ್ದರಾಮಯ್ಯ ವಿರುದ್ಧವೂ ಮಂಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರು ವಿರೋಧ ಪಕ್ಷದಲ್ಲಿ ಇದ್ದುಕೊಂಡು ವಿರೋಧ ಮಾಡಬೇಕು ಎಂದು ಮಾತನಾಡುತ್ತಿದ್ದಾರೆ, ಅದರ ಬಗ್ಗೆ ನನ್ನದೇನೂ ಆಕ್ಷೇಪವಿಲ್ಲ. ಆದರೆ ಸುಪ್ರೀಂಕೋರ್ಟ್ ತೀರ್ಪು ನೀಡಿ ಪ್ರಕರಣ ಇತ್ಯರ್ಥಗೊಳಿಸಿದ ಮೇಲೂ ಅದನ್ನು ವಿವಾದಾತ್ಮಕ ಜಾಗ ಎಂದು ಸಿದ್ದರಾಮಯ್ಯ ಹೇಳಿರುವುದು ತಪ್ಪು ಎಂಬುದಾಗಿ ಎ.ಮಂಜು ಖಂಡಿಸಿದ್ದಾರೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ
ಪತ್ನಿಗೆ ಮಕ್ಕಳಾಗುವುದಿಲ್ಲ, ಇನ್ನೊಂದು ಮದ್ವೆಯಾಗಲು ಬಿಡ್ತಿಲ್ಲ- ಕಾನೂನಿನಡಿ ನಾನು ಏನು ಮಾಡಬಹುದು?