ಚಾಮರಾಜನಗರ: ಮುಂದಿನ ವಿಧಾನಸಭಾ ಚುನಾವಣೆಗೆ ರಾಜ್ಯದ 224 ಕ್ಷೇತ್ರಗಳಲ್ಲೂ ಜನತಾ ಪಾರ್ಟಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಅದರಂತೆ ಚಾಮರಾಜನಗರ ಜಿಲ್ಲೆಯಲ್ಲೂ ಪಕ್ಷ ಸ್ಪರ್ಧೆ ಮಾಡಲಿದೆ ಎಂದು ಜನತಾ ಪಾರ್ಟಿ ರಾಜ್ಯಾಧ್ಯಕ್ಷೆ ಬಿ.ಟಿ.ಲಲಿತಾ ನಾಯಕ್ ತಿಳಿಸಿದರು.
ಚಾಮರಾಜನಗರವನ್ನು ರಾಜಕಾರಣಿಗಳು ಶಾಪಗ್ರಸ್ತ ಜಿಲ್ಲೆಯನ್ನಾಗಿ ಮಾಡಿದ್ದಾರೆ. ಶಿಕ್ಷಣ, ಬಡತನ, ವಸತಿ ಸೌಲಭ್ಯವಿಲ್ಲದೆ ಜನರು ಸಮಸ್ಯೆ ಅನುಭವಿಸುತ್ತಿದ್ದು, ಬಿಜೆಪಿ ಸೇರಿದಂತೆ ಉಳಿದ ರಾಜಕೀಯ ಪಕ್ಷಗಳು ಭ್ರಷ್ಟವಾಗಿವೆ. ಇವುಗಳನ್ನು ಹೊರತುಪಡಿಸಿ ಪ್ರಾಮಾಣಿಕರು ಸಿಕ್ಕರೆ ಜಿಲ್ಲೆ ಅಭಿವೃದ್ಧಿಯಾಗಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಗಾಗಿ ಕಬ್ಬಳ್ಳಿ ನಾಗರತ್ನಮ್ಮ ಹಾಗೂ ನಜೀರ್ ಸಾಹೇಬ್ ಅವರನ್ನು ಹೊರತುಪಡಿಸಿದರೆ ಬೇರೆಯವರು ಒಳ್ಳೆಯ ಕೆಲಸ ಮಾಡಿಲ್ಲ. ಜನತಾ ಪಾರ್ಟಿ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬಂದರೆ ಹೊಸ ಯೋಜನೆಗಳನ್ನು ತರಲು ಪ್ರಯತ್ನಿಸುತ್ತೇವೆ. ಸರ್ಕಾರ ಅಗತ್ಯ ವಸ್ತುಗಳ ಬೆಲೆಯನ್ನು ಗಗನಕ್ಕೇರಿಸಿದೆ. ಬಡ ಕಾರ್ಮಿಕರಿಗೆ ಮಾತ್ರ ಕೂಲಿ ಹೆಚ್ಚಳವಾಗಿಲ್ಲ. ರೈತರ ಸಮಸ್ಯೆಯನ್ನು ಸರ್ಕಾರ ತಿಳಿದುಕೊಳ್ಳುತ್ತಿಲ್ಲ. ಹಾಗಾಗಿ ನೇಗಿಲು ಹೊತ್ತ ರೈತನ ಗುರುತು ಇರುವ ನಮ್ಮ ಪಕ್ಷವನ್ನು ಮುಂದಿನ ಬಾರಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ನಾಗೇಶ್, ರಾಜ್ಯ ಕಾರ್ಯದರ್ಶಿ ಪ್ರದೀಪ್ ಹೆಗಡೆ, ಜಿಲ್ಲಾಧ್ಯಕ್ಷ ಅಣ್ಣಯ್ಯ, ಕೋರ್ ಕಮಿಟಿ ಸದಸ್ಯ ಅಬ್ದುಲ್ ಬಶೀರ್, ಮೈಸೂರು ಜಿಲ್ಲಾಧ್ಯಕ್ಷ ಶ್ರೀನಿವಾಸ್, ಉತ್ತರ ಕನ್ನಡದ ಸಂಘಟನಾ ಕಾರ್ಯದರ್ಶಿ ನಾಗರಾಜು ಇದ್ದರು.