ನವದೆಹಲಿ: ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಕರ್ನಾಟಕದ ರಾಜಕೀಯದ ಮಟ್ಟಿಗಂತೂ ಯಾರು ಯಾವಾಗ ಯಾವ ಪಕ್ಷದಲ್ಲಿ ಇರುತ್ತಾರೆ ಎಂಬುದೇ ರಾಜಕೀಯ ಲೆಕ್ಕಾಚಾರದ ವಿಚಾರವಾಗಿ ಬಿಟ್ಟಿದೆ. ಅಧಿಕಾರ ಚುಕ್ಕಾಣಿ ಹಿಡಿಯುವ ಆಟದಲ್ಲಿ ಎಲ್ಲವೂ ಸರಿಯೇ, ಯಾವುದೂ ತಪ್ಪಲ್ಲ!. ವಿಧಾನಸಭೆ ಚುನಾವಣೆಯಲ್ಲಿ ಜನರಿಂದ ಚುನಾಯಿತರಾಗಿ ಶಾಸಕರಾದವರು ಕೂಡ ನಾನಾ ಕಾರಣಗಳಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಪಕ್ಷಕ್ಕೂ ರಾಜೀನಾಮೆ ಕೊಟ್ಟು ಇನ್ನೊಂದು ಪಕ್ಷಕ್ಕೆ ಸೇರಿ ಸಚಿವರಾಗುವುದು ಕೂಡ ರಾಜಕಾರಣದಲ್ಲಿ ಅತ್ಯಂತ ಸಹಜ ಎನ್ನುವಂತಾಗಿದೆ.
ಸದ್ಯ ಬಿಜೆಪಿ ಅಧಿಕಾರದಲ್ಲಿರುವ ಕಾರಣ, ಇತರೆ ಪಕ್ಷದ ಶಾಸಕರು, ಸಂಸದರು, ರಾಜಕಾರಣಿಗಳು ಹಲವು ಕಾರಣಗಳಿಗೆ ಪಕ್ಷಾಂತರ ಮಾಡುತ್ತಾರೆ. ಅವರಿಗೆ ಬಿಜೆಪಿ ನಾಯಕರಿಂದ ಆಹ್ವಾನ ಬಂದಿದೆ ಎಂಬಿತ್ಯಾದಿ ಸುದ್ದಿಗಳು ಹರಡುವುದೂ ಇದ್ದೇ ಇದೆ. ಹೀಗಿರುವಾಗ ಯುವ ಸಂಸದರೊಬ್ಬರು ಕಾಂಗ್ರೆಸ್ನ ಕಟ್ಟಾಳು ಡಿ.ಕೆ.ಸುರೇಶ್ ಅವರಿಗೆ ಬಿಜೆಪಿ ಸೇರಲು ಆಹ್ವಾನಿಸಿದ್ದಾರೆ! ಅದೂ ಬಹಿರಂಗವಾಗಿ ಟ್ವೀಟ್ ಮೂಲಕ!
ಬಿಜೆಪಿ ಸೇರ್ಕೊಳ್ಳಿ ಎಂದು ಚುಟುಕಾಗಿ ಕನ್ನಡದಲ್ಲೇ ಡಿ.ಕೆ.ಸುರೇಶ್ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದು ಬೇರಾರೂ ಅಲ್ಲ- ಲಡಾಖ್ನ ಸಂಸದ ಜಮ್ಯಾಂಗ್ ತ್ಸೆರಿಂಗ್ ನಂಗ್ಯಾಲ್. ಸಂಸತ್ ಅಧಿವೇಶನ ನಡೆಯುತ್ತಿರುವ ಕಾರಣ ಎಲ್ಲ ಸಂಸದರೂ ಅಲ್ಲಿ ಸೇರಿದ್ದು, ಕರ್ನಾಟಕದ ಸಂಸದರಾದ ತೇಜಸ್ವಿ ಸೂರ್ಯ, ಪ್ರತಾಪ ಸಿಂಹ ಅವರಿಂದ ಕನ್ನಡ ಕಲಿತು, ಮಾತಿನ ಪ್ರಯೋಗವನ್ನು ಡಿ.ಕೆ.ಸುರೇಶ್ ಅವರ ಜತೆಗೆ ಮಾಡಿದ್ದಾರೆ. ಅವರು ಈ ವಿಷಯವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದು, ಡಿ.ಕೆ.ಸುರೇಶ್ ಅವರೂ ಚಿತ್ರದಲ್ಲಿದ್ದಾರೆ.
When three Kannadigas were trying to teach me to speak Kannada. I told @DKSureshINC to ‘BJP serikolli’.
So much fun with @mepratap and @Tejasvi_Surya pic.twitter.com/ROHiNmlfG9
— Jamyang Tsering Namgyal (@MPLadakh) March 3, 2020