ನವದೆಹಲಿ: ಭಾರತದಲ್ಲಿರುವ ವಿವಿಧ ದೇಶಗಳ ರಾಜತಾಂತ್ರಿಕರ ತಂಡವೊಂದು ಜಮ್ಮು- ಕಾಶ್ಮೀರಕ್ಕೆ ಜ.9 ಮತ್ತು 10ರಂದು ಭೇಟಿ ನೀಡಲಿದ್ದು, ಅಲ್ಲಿನ ವಸ್ತುಸ್ಥಿತಿ ಅಧ್ಯಯನ ಮಾಡಲಿದೆ. ಈ ತಂಡದಲ್ಲಿ 18 ರಾಜತಾಂತ್ರಿಕ ಅಧಿಕಾರಿಗಳು ಇರಲಿದ್ದಾರೆ. ಜಮ್ಮು- ಕಾಶ್ಮೀರಕ್ಕೆ 370ನೇ ವಿಧಿ ಅನ್ವಯ ಇದ್ದ ವಿಶೇಷ ಸ್ಥಾನಮಾನವನ್ನು ಕಳೆದ ಆಗಸ್ಟ್ 5ರಂದು ರದ್ದುಗೊಳಿಸಿದ ಬಳಿಕ ಕಾಶ್ಮೀರ ಕಣಿವೆಯಲ್ಲಿ ಸಂಪರ್ಕ, ಸಂವಹನ ಕಡಿತ ಮತ್ತು ರಾಜಕೀಯ ನಾಯಕರ ಬಂಧನದ ಬಗ್ಗೆ ವಿಶ್ವಸಮುದಾಯದಿಂದ ವ್ಯಾಪಕ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.
ಜಮ್ಮು- ಕಾಶ್ಮಿರ ಕೇಂದ್ರಾಡಳಿತ ಪ್ರದೇಶ (ಶಾಸನಸಭೆ ಸಹಿತ) ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶ (ಶಾಸನಸಭೆ ರಹಿತ) ಎಂದು ಪುನರ್ ರಚಿಸಿದೆ. ಈ ಬೆಳವಣಿಗೆಯ ನಂತರ ಅಲ್ಲಿನ ವಸ್ತುಸ್ಥಿತಿ ಅಧ್ಯಯನಕ್ಕೆ ಕೇಂದ್ರ ಕಳುಹಿಸುತ್ತಿರುವ ಮೊದಲ ಅಧಿಕೃತ ವಿದೇಶಿ ರಾಜತಾಂತ್ರಿಕರ ತಂಡ ಇದಾಗಿದೆ. ಕಳೆದ ಅಕ್ಟೋಬರ್ನಲ್ಲಿ ಐರೋಪ್ಯ ಸಂಸತ್ತಿನ 23 ಸದಸ್ಯರನ್ನು ಸ್ವಯಂಸೇವಾ ಸಂಸ್ಥೆಯೊಂದು ಕಾಶ್ಮೀರಕ್ಕೆ ಕರೆದೊಯ್ದಿತ್ತು. ವಿದೇಶಿ ಸಂಸದರು ಕಾಶ್ಮೀರಕ್ಕೆ ಭೇಟಿ ನೀಡಬಹುದು, ಭಾರತದ ಸಂಸದರು ಭೇಟಿ ನೀಡಲು ಕೇಂದ್ರ ಸರ್ಕಾರ ಅವಕಾಶ ನೀಡುತ್ತಿಲ್ಲವೆಂದು ವಿರೋಧ ಪಕ್ಷಗಳು ಕಿಡಿಕಾರಿದ್ದವು.