ಶಿವಮೊಗ್ಗ: ಮಲೆನಾಡಿನ ಭಾಷೆ, ಸಂಸ್ಕೃತಿ ಮತ್ತು ಪ್ರಕೃತಿಯನ್ನು ಆಧರಿಸಿದ ಪರಿಸರ ಕಾಳಜಿವುಳ್ಳ ಜಲಪಾತ ಸಿನಿಮಾ ಅ.13ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ ಎಂದು ನಿರ್ದೇಶಕ ರಮೇಶ್ ಬೇಗಾರ್ ತಿಳಿಸಿದರು.
ಜಲಪಾತ ಪರಿಪೂರ್ಣ ಮಲೆನಾಡು ಶೈಲಿಯ ಚಿತ್ರವಾಗಿದ್ದು ಸ್ಥಳೀಯ ಪ್ರತಿಭೆಗಳ ಮಹಾವೇದಿಕೆಯಾಗಿದೆ. ಶಿವಮೊಗ್ಗದ ಭಾರತ್ ಸಿನಿಮಾಸ್ ಮತ್ತು ತೀರ್ಥಹಳ್ಳಿ ವೆಂಕಟೇಶ್ವರ ಚಿತ್ರಮಂದಿರದಲ್ಲೂ ಪ್ರದರ್ಶನಗೊಳ್ಳಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಲೆನಾಡಿನ ಪರಿಸರ ನಾಶಕ್ಕೆ ಕಾರಣವಾದ ವಿವಿಧ ವಿಚಾರವನ್ನು ಫ್ಯಾಮಿಲಿ ಡ್ರಾಮಾ ಶೈಲಿಯಲ್ಲಿ ಹೇಳುವ ವಿಶಿಷ್ಟ ಸಿನಿಮಾ ಇದು. ಶಶೀರ ಶೃಂಗೇರಿ ಛಾಯಾಗ್ರಹಣ, ಅವಿನಾಶ್ ಶೃಂಗೇರಿ ಸಂಕಲನ, ಸಾದ್ವಿನಿ ಕೊಪ್ಪ ಸಂಗೀತ ನೀಡಿದ್ದಾರೆ. ಪ್ರಸಿದ್ಧ ನಟ ಪ್ರಮೋದ್ ಶೆಟ್ಟಿ ವಿಭಿನ್ನ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪದವಿ ಪೂರ್ವ ಸಿನಿಮಾ ಖ್ಯಾತಿಯ ರಜನೀಶ್ ಪೂರ್ಣ ಪ್ರಮಾಣದ ನಾಯಕನಾಗಿದ್ದು ಶೃಂಗೇರಿಯ ರಂಗಪ್ರತಿಭೆ ನಾಗಶ್ರೀ ಬೇಗಾರ್ ನಾಯಕಿಯಾಗಿದ್ದಾರೆ ಎಂದರು.
ಚಿತ್ರದ ಪರಿಸರ ಗೀತೆಯೊಂದನ್ನು ಗಾಯಕ ವಿಜಯಪ್ರಕಾಶ್ ಹಾಡಿದ್ದು ವನಿತಾ ವೆಂಕಟೇಶ್ ಮತ್ತು ಮಧುರಾ ಕವಿಲುಕೊಡಿಗೆ ಸಾಹಿತ್ಯವಿದೆ. ಮಲೆನಾಡಿನ ಭಾಷೆ ಆಧಾರಿತ ಸಿನಿಮಾ ಇದಾಗಿದ್ದು ಹೊಸನಗರ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಭಾಗದಲ್ಲಿ ಚಿತ್ರೀಕರಣ ಆಗಿದೆ. ರಾಜ್ಯದಲ್ಲಿ 22 ಟಾಕೀಸ್ಗಳಲ್ಲಿ ಬಿಡುಗಡೆ ಆಗಿದ್ದು ವಿಶೇಷವಾಗಿ ಶಿವಮೊಗ್ಗ, ಮೈಸೂರು, ಚಿಕ್ಕಮಗಳೂರಲ್ಲಿ ಪ್ರದರ್ಶನಕ್ಕೆ ಹೆಚ್ಚು ಒತ್ತು ನೀಡಲಾಗಿದೆ ಎಂದರು.
ನಟಿ ನಾಗಶ್ರೀ ಬೇಗಾರ್ ಮಾತನಾಡಿ, ಹಲವರು ನಟ ನಟಿಯರು ಮಲೆನಾಡಿನವರು ಇರಬಹುದು. ಆದರೆ ಮಲೆನಾಡಿನ ಸಮಸ್ಯೆಗಳನ್ನು ಬಿಂಬಿಸುವ ಈ ಸಿನಿಮಾ ಬಿಗ್ ಬಜೆಟ್ ಸಿನಿಮಾಗೂ ಸ್ಪರ್ಧೆ ಮಾಡುವಂತಿದೆ ಎಂದರು. ನಟ ರಜನೀಶ್ ಮಾತನಾಡಿ, ಈ ಸಿನಿಮಾ ಕುಟುಂಬ ಮತ್ತು ಲವ್ ಸ್ಟೋರಿ ಆಧಾರಿತವಾಗಿ ಮೂಡಿಬಂದಿದೆ ಎಂದರು. ಕಲಾವಿದರಾದ ಎ.ಎಸ್.ನಯನಾ, ರೇಖಾ ಪ್ರೇಮ್ಕುಮಾರ್, ಬಿ.ಎಲ್.ರವಿಕುಮಾರ್, ಕಾರ್ತಿಕ್ ಸುದ್ದಿಗೋಷ್ಠಿಯಲ್ಲಿದ್ದರು.