ಜಗಳೂರು: ಪಡಿತರ ಹಂಚಿಕೆಯಲ್ಲಿ ಬಡವರಿಗೆ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಬೇಕೆಂದು ಜೆಎಂಎಫ್ ಸಿ ಹಾಗೂ ಸಿವಿಲ್ ನ್ಯಾಯಾಧೀಶ ತಿಮ್ಮಯ್ಯ ಹೇಳಿದರು.
ಇಲ್ಲಿನ ತರಳಬಾಳು ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆಯಲ್ಲಿ ಮಾತನಾಡಿ, ಲಾಕ್ಡೌನ್ನಿಂದ ಕೂಲಿ, ಕೃಷಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ಎರಡು ತಿಂಗಳ ಪಡಿತರವನ್ನು ಉಚಿತವಾಗಿ ನೀಡುತ್ತಿದೆ. ಅವರಿಂದ ಹಣ ಪಡೆಯುವುದು, ತೂಕದಲ್ಲಿ ವ್ಯತ್ಯಾಸ ಮಾಡಿದರೆ ಪರವಾನಗಿ ರದ್ದುಪಡಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಸಂಘದ ಅಧ್ಯಕ್ಷ ಎಂ.ಆರ್.ಪುಟ್ಟಣ್ಣ ಮಾತನಾಡಿ, ಹಲವು ವರ್ಷಗಳಿಂದ ಅಂಗಡಿ ಮಾಡುತ್ತಿದ್ದೇವೆ. ಎಷ್ಟೇ ಅಡೆ-ತಡೆಗಳಿದ್ದರೂ ಸೇವಾ ಮನೋಭಾವದಿಂದ ಸರ್ಕಾರದಿಂದ ಬರುವ ಎಲ್ಲ ಸೌಲಭ್ಯಗಳನ್ನು ಜನರಿಗೆ ತಲುಪಿಸುತ್ತೇವೆ ಎಂದರು.
ತಹಸೀಲ್ದಾರ್ ಹುಲ್ಲುಮನಿ ತಿಮ್ಮಣ್ಣ ಮಾತನಾಡಿದರು. ಸಿಪಿಐ ದುರುಗಪ್ಪ, ವಿವಿಧ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಇದ್ದರು.