ಶಿವಮೊಗ್ಗ: ಎಸ್ಡಿಪಿಐ ಸಂಘಟನೆ ಕರಪತ್ರವೊಂದರಲ್ಲಿ ಮಹಾವೀರ ವೃತ್ತ ಹೆಸರಿನ ಬದಲು ಶಾ ಅಲೀಂ ದಿವಾನ್ ದರ್ಗಾ ವೃತ್ತ ಎಂದು ಕಾನೂನುಬಾಹಿರವಾಗಿ ನಮೂದಿಸಿದ್ದನ್ನು ವಿರೋಧಿಸಿ ಜೈನ ಸಮಾಜದ ಪ್ರಮುಖರು, ವಿಎಚ್ಪಿ, ಬಜರಂಗದಳ, ಮಾತೃಶಕ್ತಿ ಹಾಗೂ ದುರ್ಗಾವಾಹಿನಿ ಸಂಘಟನೆಗಳ ಪ್ರಮುಖರು ಡಿಸಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಎಸ್ಡಿಪಿಐ ಸಂಘಟನೆ ಅ.31ರಂದು ಪ್ರತಿಭಟನೆ ಹಮ್ಮಿಕೊಂಡಿದ್ದ ಸಂದರ್ಭ ಕರಪತ್ರ ಹಂಚಿತ್ತು. ಇದರಲ್ಲಿ ಮಹಾವೀರ ವೃತ್ತ ಎಂದು ಹೆಸರಿಸುವ ಬದಲು ಶಾ ಅಲೀಂ ದಿವಾನ್ ದರ್ಗಾ ಎಂದು ನಮೂದಿಸಲಾಗಿತ್ತು. ಇದು ಕಾನೂನಿಗೆ ವಿರೋಧವಾಗಿದೆ. 50 ವರ್ಷಗಳ ಹಿಂದೆಯೇ ಸರ್ಕಾರ ಈ ವೃತ್ತವನ್ನು ಭಗವಾನ್ ಮಹಾವೀರ ವೃತ್ತ ಎಂದು ಘೊಷಿಸಿದೆ. ಆದರೆ ಎಸ್ಡಿಪಿಐ ಸಂಘಟನೆ ಈ ಹೆಸರನ್ನು ಬದಲಾವಣೆ ಮಾಡಿಕೊಂಡು ಷಡ್ಯಂತ್ರ ಮಾಡುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ ಮುಸ್ಲಿಂ ಸಂಘಟನೆಗಳು ಅನೇಕ ಬಡಾವಣೆಗಳ ಹೆಸರನ್ನು ಅನಧಿಕೃತವಾಗಿ ಬದಲಾಯಿಸುತ್ತಿವೆ. ಇದು ಹಿಂದು ಸಮಾಜದವರಿಗೆ ಭಾವನಾತ್ಮಕವಾಗಿ ನೋವು ತಂದಿದೆ. ಕೋಮುಭಾವನೆ ಕೆರಳಿಸುತ್ತದೆ. ಶಾಂತಿ ಸೌಹಾರ್ದತೆ ಹಾಳು ಮಾಡಲು ಹೊರಟಿರುವ ಎಸ್ಡಿಪಿಐ ಮುಸ್ಲಿಮ್ ಸಂಘಟನೆಯನ್ನು ನಿಷೇಧಿಸಬೇಕು. ಆ ಸಂಘಟನೆ ಕಾರ್ಯಕರ್ತರ ಮೇಲೆ ಮೊಕದ್ದಮೆ ಹೂಡಬೇಕೆಂದು ಒತ್ತಾಯಿಸಿದರು.
ವಿಎಚ್ಪಿ ಜಿಲ್ಲಾಧ್ಯಕ್ಷ ರಮೇಶ್ಬಾಬು, ಪ್ರಮುಖರಾದ ದೀನದಯಾಳ್, ಎಸ್.ಆರ್.ನಟರಾಜ್, ನಾರಾಯಣ್ ಜಿ.ವರ್ಣೆಕರ್, ರಾಜೇಶ್ ಗೌಡ, ಸತೀಶ್ ಮಂಚೇಮನೆ, ಎಸ್.ಆರ್.ಸುಧಾಕರ್, ಅಂಕುಶ್ ಇತರರಿದ್ದರು.