ಬೆಂಗಳೂರು: ಪ್ಯಾನ್ ಇಂಡಿಯಾ ಸಂಸ್ಕೃತಿಯಿಂದ ಕನ್ನಡ ಚಿತ್ರರಂಗಕ್ಕೆ ಅಪಾಯವಾಗುತ್ತಿದೆ ಎಂಬ ಜಗ್ಗೇಶ್ ಅವರ ಮಾತಿಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗುತ್ತಿವೆ. ಜಗ್ಗೇಶ್ ಅವರು ಕೆಲವು ಹೀರೋಗಳಿಗೆ ಬಕೆಟ್ ಹಿಡಿದು, ಇನ್ನೂ ಕೆಲವು ಹೀರೋಗಳನ್ನು ತೆಗಳುತ್ತಿದ್ದಾರೆ ಎಂದು ಯಶ್, ಸುದೀಪ್ ಮುಂತಾದವರ ಅಭಿಮಾನಿಗಳು ಬೇಸರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸೋಲಿನ ಪೋಸ್ಟ್ಮಾರ್ಟಂ: ವಿಜಯ್ ರಾಘವೇಂದ್ರ ಬದಲಾಗಿದ್ದಾರೆ…
ಈ ಕುರಿತು ಪ್ರತಿಕ್ರಿಯಿಸಿರುವ ಜಗ್ಗೇಶ್, ‘ಎಲ್ಲರ ತಂದೆ-ತಾಯಿ ಬಕೆಟ್ ಹಿಡಿದೇ ಅವರ ಮಕ್ಕಳನ್ನು ಬೆಳೆಸಿರುತ್ತಾರೆ. ಪಾಪ ಯವ್ವನದ ಪೊರೆಬಂದಾಗ, ಬಿಟ್ಟಿ ಅನ್ನ ತಿನ್ನುವಾಗ ಬಕೆಟ್ ಅರಿವಾಗದು! ತನ್ನ ಸ್ವಂತ ಅನ್ನ ಗಿಟ್ಟಿಸುವಾಗ ಅವರ ಅಪ್ಪ-ಅಮ್ಮ ಹಿಡಿದ ಬಕೆಟ್ ಇವರ ಕೈ ಸೇರುವುದು! ಆಗ ಬಕೆಟ್ ಬೆಲೆ ಅರಿವಾಗುವುದು. ಬೆಳಿಗ್ಗೆ ಎದ್ದಾಗ, ಹಾಗಾದರೆ ಇವರು ಬಕೆಟ್ ಬಳಸದೆ ತೊಳೆಯಲು ಮಕ್ಕಳಂತೆ ಅಮ್ಮನ ಕರೆಯಬಹುದಾ?’ ಎಂದು ಜಗ್ಗೇಶ್ ವ್ಯಂಗ್ಯವಾಡಿದ್ದಾರೆ.
ಕೆಲವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಕಾಲೆಳೆಯುತ್ತಿರುವ ಕುರಿತು ಮಾತನಾಡಿರುವ ಅವರು, ‘ಈ ಮಕ್ಕಳ ಬಗ್ಗೆ ನನಗೆ ಎಳ್ಳಷ್ಟೂ ಬೇಸರವಿಲ್ಲ. ಕಾರಣ, ನನಗೆ 34/28ವರ್ಷದ ಮಕ್ಕಳಿದ್ದಾರೆ. ನನಗೆ ಇಂದಿನ ಉದ್ವೇಗ, ಹತಾಶೆ, ಸಿಟ್ಟು, ಜಿಗುಪ್ಸೆಯ ಮನೋಭಾವದ ಬಗ್ಗೆ ಅರಿವಿದೆ ಮತ್ತು ಅನುಕಂಪವಿದೆ. ಮಾತು ಮತ್ತು ಅಕ್ಷರ ಅರಿವಾಗದೆ ತಮ್ಮ ಮೂಗಿನ ನೇರಕ್ಕೆ ಅರ್ಥಮಾಡಿಕೊಳ್ಳುವ ಆತುರಗುಣಕ್ಕೆ ಬೇಸರವಾಗುತ್ತದೆ. 40ವರ್ಷ ಇಂಥ 40 ಸಾವಿರ ಜನರ ಜೈಸಿ ಬಂದವ ನಾನು’ ಎಂದು ಜಗ್ಗೇಶ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಹಳಿಗೆ ಮರಳಿದ ಶರ್ವಿುಳಾ; ನೋವು ಮರೆಯುವ ಹಾದಿಯಲ್ಲಿ…
ಇನ್ನು ಪ್ಯಾನ್ ಇಂಡಿಯಾ ಹೇಳಿಕೆಯ ಬಗ್ಗೆ ಸಮರ್ಥಿಸಿಕೊಂಡಿರುವ ಅವರು, ‘ನಮ್ಮನ್ನು ಹುಟ್ಟಿಸಿದ್ದು ಹಳ್ಳಿಯಲ್ಲಿ, ಕೂಲಿ ಮಾಡಿ ಸಗಣಿ ತಟ್ಟಿ ಹಾಲು ಮಾರಿ ಮಮತೆಯ ರಕ್ತ ಬಸಿದು ಕನ್ನಡ ಕಲಿಸಿದ ತಂದೆ-ತಾಯಿಯೇ ವಿನಃ ಅನ್ಯರಲ್ಲ. ಹಾಗಾಗಿ ನಮಗೆ ಸಿಂಹಾಸನದ ಮೇಲೆ ಕೂರಲು ಗೊತ್ತು, ಗೋಣಿಚೀಲ ಹಾಸಿ ಮಲಗಲು ಗೊತ್ತು. ಅದಕ್ಕೇ ಕನ್ನಡಿಗರು ನಮ್ಮನ್ನ ಹೃದಯದಲ್ಲಿ ಸಿಂಹಾಸನ ಹಾಕಿ ಕೂರಿಸಿದ್ದಾರೆ. ಅನ್ಯರಮೇಲೆ ಒಲವು ಇಲ್ಲಾ, ಬೇಕು ಇಲ್ಲಾ’ ಎಂದು ಜಗ್ಗೇಶ್ ಹೇಳಿದ್ದಾರೆ.