ಜಗಳೂರು: ತಾಲೂಕಿನ ಮಹತ್ವಾಕಾಂಕ್ಷೆಯ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಚಿಕ್ಕ ಅರಕೆರೆ ಬಳಿ ನಡೆಯುತ್ತಿರುವ ಪೈಪ್ಲೈನ್ ಕಾಮಗಾರಿ ಸ್ಥಳಕ್ಕೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕೆ. ಕಲ್ಲೇರುದ್ರೇಶ್ ಮತ್ತು ನೀರಾವರಿ ಯೋಜನೆ ಇಂಜಿನಿಯರ್ ವಿಕಾಸ್ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ರೂಪುಗೊಂಡಿದ್ದು ತರಳಬಾಳು ಹುಣ್ಣಿಮೆ ವೇಳೆ. ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಅವರ ದೂರದೃಷ್ಟಿಯಿಂದ ಅಂದಿನ ಸಿಎಂ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕಿದರು. ನಂತರ ಬಜೆಟ್ನಲ್ಲಿ ಜಗಳೂರಿಗೆ 250 ಕೋಟಿ ಮಂಜೂರಾಯಿತು ಎಂದು ಬಿ.ಕೆ.ಕಲ್ಲೇರುದ್ರೇಶ್ ಮಾಹಿತಿ ನೀಡಿದರು.
ನೀರಾವರಿ ಇಂಜಿನಿಯರ್ ವಿಕಾಸ್ ಮಾತನಾಡಿ, ಪೈಪ್ಲೈನ್ ಕಾಮಗಾರಿ ಆರಂಭದಿಂದಲೂ ಗುಣಮಟ್ಟವನ್ನು ಕಾಯ್ದುಕೊಳ್ಳಲಾಗಿದೆ. ಪೈಪ್ಗಳು ಸೋರಿಕೆಯಾಗದಂತೆ ತಂತ್ರಜ್ಞಾನ ಅಳವಡಿಸಿ ಜೋಡಿಸಲಾಗುತ್ತದೆ ಎಂದರು.
ಇಂಜಿನಿಯರ್ ರಜತ್, ಗುತ್ತಿಗೆದಾರ ಪ್ರಶಾಂತ, ರೈತರಾದ ದೇವಿಕೆರೆ ಗುರುಸಿದ್ದಪ್ಪ, ಮಂಜಣ್ಣ, ಕಾಟನನಹಳ್ಳಿ ಬಸವರಾಜ್, ಹನುಮಂತಪ್ಪ ಇದ್ದರು.