ಮದ್ದೂರು: ಶ್ರೀಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ 20 ಲಕ್ಷ ರೂ. ವೆಚ್ಚದಲ್ಲಿ ನಿವೇಶನ ಕಲ್ಪಿಸಿದ್ದು ಮುಂದಿನ ವರ್ಷದೊಳಗೆ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ ಎಂದು ಸಂಘದ ಅಧ್ಯಕ್ಷ ಬಿ.ವಿ.ಮಂಜುನಾಥ್ ತಿಳಿಸಿದರು.
ಪಟ್ಟಣದ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಜಗಜ್ಯೋತಿ ಬಸವೇಶ್ವರ ಪತ್ತಿನ ಸಹಕಾರ ಸಂಘದ 2021-22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದಲ್ಲಿ 1,186 ಷೇರುದಾರರಿದ್ದು 600ಕ್ಕೂ ಹೆಚ್ಚು ಸದಸ್ಯರಿಗೆ ವೈಯಕ್ತಿಕ ಸಾಲ ವಿತರಿಸಿರುವುದಾಗಿ ಹೇಳಿದರು.
ಪ್ರಸಕ್ತ ವರ್ಷ 3 ಕೋಟಿ ವಹಿವಾಟು ನಡೆಸಿದ್ದು 5.5 ಲಕ್ಷ ಲಾಭ ಗಳಿಕೆಯಲ್ಲಿ ಸಂಘವು ಆರ್ಥಿಕ ಪ್ರಗತಿಯಲಿದೆ. ಸಂಘ ಆರಂಭದಿಂದ ಇಲ್ಲಿಯವರೆವಿಗೂ 1.5 ಕೋಟಿ ರೂ. ಸಾಲ ವಿತರಿಸಿ ಷೇರುದಾರರು ಸ್ವ ಉದ್ಯೋಗ ಕಂಡುಕೊಳ್ಳಲು ಅನುಕೂಲ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಸರ್ಕಾರಿ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿ ಪದ್ದೊನ್ನತಿ ಹೊಂದಿದ ಸಮುದಾಯದ ಅಧಿಕಾರಿಗಳನ್ನು ಅಭಿನಂದಿಸಿ ಗೌರವಿಸುವ ಜತೆಗೆ ಹಿರಿಯ ನಾಗರಿಕ ಶರಣ ದಂಪತಿಯನ್ನು ಅಭಿನಂದಿಸಲು ಸಭೆ ತೀರ್ಮಾನಿಸಿತಲ್ಲದೆ, ಷೇರುದಾರರ ಸಹಕಾರದಿಂದ ಸಂಘವು ಮುಂಚೂಣಿ ಸ್ಥಾನದಲ್ಲಿದೆ ಎಂದರು.
ಸಹಕಾರ ಸಂಘದ ನಿರ್ದೇಶಕರಾದ ಎಸ್.ಎಂ. ಗಂಗಾಧರ್, ಎಚ್.ಎಸ್. ರಾಜಶೇಖರಮೂರ್ತಿ, ಎಂ. ವೀರಭದ್ರಸ್ವಾಮಿ, ತೋಂಟದಾರ್ಯ, ಎಂ. ವೀರೇಂದ್ರ, ಪಿ.ಬಿ. ಮಹದೇವಸ್ವಾಮಿ, ತ್ರಿವೇಣಿ, ಸಿದ್ದಮ್ಮ, ಬಸವರಾಜು, ಸಿ.ಜಿ. ಗೌರಿಶಂಕರ್, ಸಿಇಒ ರಾಜಮಣಿ ಇದ್ದರು
ಸನ್ಮಾನ: ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ಫಲಿತಾಂಸದಲ್ಲಿ ಅತಿ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.