More

    ಅಂಗವಿಕಲರಿಗೆ ನೆರವಾಗುವುದು ಎಲ್ಲರ ಕರ್ತವ್ಯ; ಸಚಿವ ಎಂ.ಬಿ. ಪಾಟೀಲ

    ವಿಜಯಪುರ: ಅಂಗವಿಕಲರಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ಔದ್ಯೋಗಿಕವಾಗಿ ನೆರವು ನೀಡುವುದು ಸರ್ಕಾರ, ಸಂಘ-ಸಂಸ್ಥೆಗಳು ಮತ್ತು ಸಮಾಜದ ಎಲ್ಲ ಗಣ್ಯರ ಕರ್ತವ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

    ನಗರದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆ (2022-23)ಯಡಿ ಅಂಗವಿಕರಲಿಗೆ ಇಂಧನ ಚಾಲಿತ ತ್ರಿ-ಚಕ್ರ ವಾಹನ ವಿತರಣೆ ಮಾಡಿ ಅವರು ಮಾತನಾಡಿದರು.

    ಅಂಗವಿಕಲತೆ ಶಾಪವಲ್ಲ. ಯಾರಿಗೆ ಬೇಕಾದರೂ ಈ ಸಮಸ್ಯೆ ಎದುರಾಗಬಹುದು. ಅವರನ್ನು ಗೌರವದಿಂದ ಕಾಣಬೇಕು. ಅವರ ಅಂಗವಿಕಲತೆಗೆ ಅನುಗುಣವಾಗಿ ಅವರಿಂದ ಸಾಧ್ಯವಾಗುವ ಕೆಲಸ ಮಾಡಲು ಅವಕಾಶ ನೀಡಬೇಕು. ಅವರಿಗೆ ಇಷ್ಟವಾದ ರಂಗದಲ್ಲಿ ಸಾಧನೆ ಮಾಡಲು ಧೈರ್ಯ ತುಂಬಿದರೆ ಅವರಲ್ಲಿ ಕೀಳರಿಮೆ ಬಾರದಂತೆ ತಡೆಯಬಹುದು. ಆ ದಿಸೆಯಲ್ಲಿ ಸಮಾಜ ಅವರಲ್ಲಿ ಧೈರ್ಯ ತುಂಬಿ ನೀವು ಸಹ ನಮ್ಮಂತೆ, ನಮ್ಮವರು ಎಂದು ಸ್ಪೂರ್ತಿ ನೀಡಿದರೆ ಅವರ ಬಾಳು ಬೆಳಗಿದಂತಾಗುತ್ತದೆ. ಈ ದಿಸೆಯಲ್ಲಿ ಸಮಾಜ ಕೆಲಸ ಮಾಡಬೇಕಾಗಿದೆ ಎಂದರು.

    ಶಾಸಕರ ಅನುದಾನದಲ್ಲಿ ಅಂಗವಿಕಲರಿಗೆ ಮೀಸಲಿರುವ ಹಣವನ್ನು ಅವರ ಕಲ್ಯಾಣ ಯೋಜನೆಗಳಿಗೆ ಬಳಸಲೇಬೇಕು. ನಮ್ಮ ಅನುದಾನದಲ್ಲಿ ಈ ಕೆಲಸವನ್ನು ಕಟ್ಟುನಿಟ್ಟಾಗಿ ಮಾಡುತ್ತಿದ್ದೇವೆ. ನಂತರ ಅನುದಾನವನ್ನು ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳುಸುತ್ತಿದ್ದೇವೆ. ಬಬಲೇಶ್ವರ ಮತಕ್ಷೇತ್ರದಲ್ಲಿ ಶೇ. 90ರಷ್ಟು ಫಲಾನುಭವಿಗಳಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸಿದ್ದೇವೆ. ಇನ್ನುಳಿದವರಿಗೂ ಶೀಘ್ರದಲ್ಲಿ ಸೌಕರ್ಯ ನೀಡಲಿದ್ದೇವೆ. ನಾವಾರಿಗೂ ಉಪಕಾರ ಮಾಡುತ್ತಿಲ್ಲ. ಇದು ನಮ್ಮ ಕರ್ತವ್ಯ ಎಂದರು.

    ಶಾಸಕರ ಅನುದಾನದಲ್ಲಿ 22, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲರ ಅನುದಾನದಲ್ಲಿ 11 ಮತ್ತು ತಾಪಂ ಅನುದಾನದಲ್ಲಿ 16 ಸೇರಿದಂತೆ ಒಟ್ಟು 49 ಫಲಾನುಭವಿಗಳಿಗೆ ಇಂಧನ ಚಾಲಿತ ತ್ರಿ- ಚಕ್ರ ವಾಹನ ವಿತರಿಸಲಾಯಿತು.

    ವಿಪ ಸದಸ್ಯ ಸುನೀಲಗೌಡ ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ, ಜಿಲ್ಲಾ ಉಪಾಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಕೆಪಿಸಿಸಿ ಪ್ರಚಾರ ಸಮಿತಿ ಮುಖ್ಯ ವಕ್ತಾರ ಸಂಗಮೇಶ ಬಬಲೇಶ್ವರ, ಬಿಎಲ್ಡಿಇ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಸೋಮದೇವರಹಟ್ಟಿ ಎಲ್ಟಿ ನಂ. 1ರ ಜಗನು ಮಹಾರಾಜ, ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಹಾಂತೇಶ ಬಿರಾದಾರ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ರಾಜಶೇಖರ ದೈವಾಡಿ, ತಾಪಂ ಮುಖ್ಯಾಧಿಕಾರಿ ಬಸವರಾಜ ಐನಾಪುರ, ಜೆ.ಎಸ್. ಪಠಾಣ, ಉಮೇಶ ಮಲ್ಲಣ್ಣವರ, ಮುಖಂಡರಾದ ಎಚ್.ಎಸ್. ಕೊರಡ್ಡಿ, ಭೀಮನಗೌಡ ಪಾಟೀಲ ಕೋಟ್ಯಾಳ, ಬಸವರಾಜ ಚಿಕ್ಕರೆಡ್ಡಿ, ಮಹೇಶಗೌಡ ಪಾಟೀಲ, ಮಧುಕರ ಜಾಧವ, ಎಸ್.ಎಸ್. ಗುದಿಗೆಣ್ಣವರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts