ನವದೆಹಲಿ: ಇಸ್ರೋದ ಮಹತ್ವಾಕಾಂಕ್ಷಿ ಗಗನಯಾನ ಮಿಷಷ್ಗೆ ಸಂಬಂಧಿಸಿದಂತೆ ಮೊದಲ ಬಾರಿಗೆ ಮಾನವ ರಹಿತ ಪರೀಕ್ಷಾ ವಾಹನದ ಉಡಾವಣೆ ಇಂದು ಯಶಸ್ವಿಯಾಗಿ ನಡೆದಿದೆ. ಆದರೆ, ತಾಂತ್ರಿಕ ಸಮಸ್ಯೆಯಿಂದ ಉಡಾವಣೆ ನಿಗದಿತ ಸಮಯಕ್ಕೆ ನೆರವೇರಲಿಲ್ಲ. 8 ಸರಿಯಾದ ಸಮಯಕ್ಕೆ ಟಿವಿ-ಡಿ1 ರಾಕೆಟ್ ಇನ್ನೇನು ನಭಕ್ಕೆ ಜಿಗಿಯಬೇಕು ಎನ್ನುವಷ್ಟರಲ್ಲಿ ಉಡಾವಣೆಯನ್ನು ತಡೆಹಿಡಿದು 10 ಗಂಟೆಗೆ ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾಗಿ ಲಾಂಚ್ ಮಾಡಲಾಯಿತು. ಈ ರೀತಿ ಯಾಕಾಯಿತು ಎಂಬುದನ್ನು ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ವಿವರಿಸಿದ್ದಾರೆ.
ಲಾಂಚ್ ಕಮ್ಯಾಂಡ್ ಅನ್ನು ನಿರ್ವಹಿಸುತ್ತಿದ್ದ ಕಂಪ್ಯೂಟರ್, ಅಸಮಂಜಸತೆಯನ್ನು ಪತ್ತೆಹಚ್ಚಿದ ಪರಿಣಾಮ ಉಡಾವಣೆಯನ್ನು ತಡೆಹಿಡಿಯಲಾಯಿತು. ಅದನ್ನು ತಕ್ಷಣವೇ ಪತ್ತೆಹಚ್ಚಿ, ಸರಿಪಡಿಸಿ 10 ಗಂಟೆಗೆ ಮರು ನಿಗದಿಯಾಗಿದ್ದ ಎರಡನೇ ಪ್ರಯತ್ನದಲ್ಲಿ ರಾಕೆಟ್ ಅನ್ನು ಯಶಸ್ವಿಯಾಗಿ ಲಾಂಚ್ ಮಾಡಲಾಯಿತು ಎಂದು ಸೋಮನಾಥ್ ತಿಳಿಸಿದ್ದಾರೆ.
ಈ ಮಿಷನ್ನ ಮುಖ್ಯ ಉದ್ದೇಶ ಸಿಬ್ಬಂದಿ ಎಸ್ಕೇಪ್ ಸಿಸ್ಟಮ್ ಪರೀಕ್ಷೆಯಾಗಿತ್ತು. ಸಿಬ್ಬಂದಿ ಎಸ್ಕೇಪ್ ಸಿಸ್ಟಮ್ ಅನ್ನು ಪ್ರಾರಂಭಿಸುವ ಮೊದಲು ರಾಕೆಟ್, ಶಬ್ದದ ವೇಗಕ್ಕಿಂತ ಸ್ವಲ್ಪ ಹೆಚ್ಚಾಯಿತು. ಎಸ್ಕೇಪ್ ಸಿಸ್ಟಮ್ನಲ್ಲಿದ್ದ ಕ್ರ್ಯೂ ಮಾಡ್ಯೂಲ್ ಅನ್ನು ವಾಹನದಿಂದ ಬೇರ್ಪಡಿಸಿ, ಸಮುದ್ರ ಮೇಲೆ ಇಳಿಯುವುದು ಸೇರಿದಂತೆ ನಂತರದ ಕಾರ್ಯಾಚರಣೆಗಳು ಯಶಸ್ವಿಯಾಯಿತು ಎಂದು ಸೋಮನಾಥ್ ಹೇಳಿದರು.
ಸಮುದ್ರದಿಂದ ಕ್ರ್ಯೂ ಮಾಡ್ಯೂಲ್ ಅನ್ನು ವಶಕ್ಕೆ ಪಡೆದ ನಂತರ ಹೆಚ್ಚು ದತ್ತಾಂಶ ಮತ್ತು ವಿಶ್ಲೇಷಣೆಯೊಂದಿಗೆ ಮತ್ತೆ ಬರುತ್ತೇವೆ. ಟೆಸ್ಟ್ ಫ್ಲೈಟ್ ವೇಳೆ ಎಲ್ಲ ಸಿಸ್ಟಮ್ ಚೆನ್ನಾಗಿ ಕಾರ್ಯನಿರ್ವಹಿಸಿವೆ ಎಂದು ತಿಳಿಸಿದರು.
ಇದೊಂದು ರೀತಿಯಲ್ಲಿ ಹಿಂದೆಂದೂ ನಡೆದಿರದ ಪ್ರಯತ್ನದಂತಿದೆ ಮತ್ತು ಮೂರು ಪ್ರಯೋಗಗಳ ಪುಷ್ಪಗುಚ್ಛದಂತಿದೆ. ಈ ಪ್ರಯೋಗ ಅಥವಾ ಮಿಷನ್ ಮೂಲಕ ನಾವು ಪರೀಕ್ಷಿಸಲು ಬಯಸಿದ್ದ ಎಲ್ಲಾ ಮೂರು ಸಿಸ್ಟಮ್ಗಳ ಗುಣಲಕ್ಷಣಗಳನ್ನು ನಾವೀಗ ನೋಡಿದ್ದೇವೆ. ಪರೀಕ್ಷಾ ವಾಹನ, ಸಿಬ್ಬಂದಿ ಎಸ್ಕೇಪ್ ಸಿಸ್ಟಮ್ ಮತ್ತು ಕ್ರ್ಯೂ ಮಾಡ್ಯೂಲ್ ಎಲ್ಲವೂ ಮೊದಲ ಯತ್ನದಲ್ಲೇ ಪರಿಪೂರ್ಣವಾಗಿ ಕಾರ್ಯನಿರ್ವಹಿಸಿವೆ ಎಂದು ಸೋಮನಾಥನ್ ಖುಷಿ ವ್ಯಕ್ತಪಡಿಸಿದರು.
ಅಂದಹಾಗೆ ಈ ಮಹತ್ವಾಕಾಂಕ್ಷೆಯ ಗಗನಯಾನವು 2035ರ ವೇಳೆಗೆ ಭಾರತೀಯ ಬಾಹ್ಯಾಕಾಶ ನಿಲ್ದಾಣವನ್ನು ಸ್ಥಾಪಿಸುವ ಮತ್ತು 2040ರ ವೇಳೆಗೆ ಭಾರತೀಯ ಗಗನಯಾತ್ರಿಯನ್ನು ಚಂದ್ರನತ್ತ ಕಳುಹಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಗುರಿಯನ್ನು ಪೂರೈಸುವ ಪ್ರಯತ್ನದಲ್ಲಿ ಮಹತ್ವದ ಮೈಲಿಗಲ್ಲಾಗಿದೆ.
ನೌಕೆ ಉಡಾವಣೆ ಪರೀಕ್ಷೆ ನಡೆದಿದ್ದೇಗೆ?: ಶನಿವಾರ ಬೆಳಗ್ಗೆ ಸತೀಶ್ ಧವನ್ ಉಡಾವಣಾ ಕೇಂದ್ರದಲ್ಲಿರುವ ಒಂದನೇ ಲಾಂಚ್ ಪ್ಯಾಡ್ನಿಂದ ಈ ಪರೀಕ್ಷೆಗಾಗಿಯೇ ತಯಾರಿಸಲಾಗಿರುವ ರಾಕೆಟ್, ಗಗನಯಾನ ನೌಕೆಯ ಮಾಡೆಲನ್ನು ಹೊತ್ತು ಉಡಾವಣೆಯಾಗಿದೆ. 1 ನಿಮಿಷದ ಬಳಿಕ 11.7 ಕಿ.ಮೀ. ಎತ್ತರಕ್ಕೆ ಸಾಗುವ ರಾಕೆಟ್ ನೌಕೆಯಿಂದ ಬೇರ್ಪಟ್ಟಿದೆ. ಒಂದೂವರೆ ನಿಮಿಷಕ್ಕೆ 16 ಕಿ.ಮೀ. ಎತ್ತರಕ್ಕೆ ತಲುಪುವ ಗಗನಯಾನ ಕ್ರ್ಯೂ ಮಾಡ್ಯೂಲ್ ಇದಾದ ಬಳಿಕ ಮೇಲ್ಭಾಗದಲ್ಲಿ ಅಳವಡಿಸಲಾಗಿರುವ ಬೂಸ್ಟರ್ನಿಂದಲೂ ಬೇರ್ಪಟ್ಟು ಭೂಮಿಯತ್ತ ಬೀಳಲು ಆರಂಭಿಸುತ್ತದೆ.
ಈ ಹಂತದಲ್ಲಿ ಗಗನಯಾನ ನೌಕೆ ಮತ್ತು ಸಿಬ್ಬಂದಿಗಳನ್ನು ರಕ್ಷಿಸಲು ಇರುವ ಉಪಕರಣ ಎರಡೂ ಪ್ರತ್ಯೇಕಗೊಂಡು ಸಮುದ್ರದತ್ತ ಧಾವಿಸಿದೆ. ಹೀಗೆ ರಾಕೆಟ್ನಿಂದ ಬೇರ್ಪಟ್ಟ 5 ಸೆಕೆಂಡ್ ಬಳಿಕ ನೌಕೆಯಲ್ಲಿರುವ ಪ್ಯಾರಾಚೂಟ್ ಬಿಚ್ಚಿಕೊಂಡಿದ್ದು, ನೌಕೆಯ ವೇಗವನ್ನು ನಿಯಂತ್ರಿಸಿ ಭೂಮಿಯತ್ತ ತರಲಿದೆ. 3 ನಿಮಿಷಗಳ ಕಾಲ ಈ ಪ್ಯಾರಾಚೂಟ್ನ ಸಹಾಯದಿಂದ ನೌಕೆ ಇಳಿದಿದೆ. ಬಳಿಕ ಮತ್ತೊಂದು ಶಕ್ತಿಶಾಲಿ ಪ್ಯಾರಾಚೂಟ್ ತೆರೆದುಕೊಂಡಿದ್ದು, ನೌಕೆಯನ್ನು ಸುರಕ್ಷಿತವಾಗಿ ಸಮುದ್ರಕ್ಕೆ ಇಳಿದಿದೆ.
ಈ ಪರೀಕ್ಷೆ ಕೇವಲ 9 ನಿಮಿಷಗಳಲ್ಲಿ ಮುಕ್ತಾಯಗೊಂಡಿದ್ದು, ಉಡ್ಡಯನ ಸ್ಥಳದಿಂದ 10 ಕಿ.ಮೀ ದೂರದ ಬಂಗಾಳಕೊಲ್ಲಿಯಿಂದ ನೌಕೆಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಪರೀಕ್ಷೆಯನ್ನು ನಡೆಸುವುದಕ್ಕೂ ಮೊದಲೇ ಇಸ್ರೋ, ನೌಕೆಯನ್ನು ಹಲವು ಬಾರಿ ಪರೀಕ್ಷೆಗೆ ಒಳಪಡಿಸಿದೆ. ಜೊತೆಗೆ ಎಂಜಿನ್, ಪ್ಯಾರಾಚೂಟ್ ಮತ್ತು ನೌಕೆಯ ವಶ ಎಲ್ಲದರ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ್ದು, ಕೊನೆಯದಾಗಿ ಈ ಮಾನವ ರಹಿತ ಗಗನಯಾನದ ಪರೀಕ್ಷೆ ನಡೆಸಲಾಗಿದೆ. (ಏಜೆನ್ಸೀಸ್)
ಭಗವಂತ ಕೇಸರಿ’ ಚಿತ್ರದ 2ದಿನದ ಕಲೆಕ್ಷನ್ 27ಕೋಟಿ ರೂ.: ಬಾಲಕೃಷ್ಣ ಸಂಭಾವನೆ ಎಷ್ಟು?
ಕಡಲತೀರಕ್ಕೆ ತೇಲಿಬಂದ ಮತ್ಸ್ಯಕನ್ಯೆ ಆಕಾರದ ನಿಗೂಢ ಜೀವಿ! ವಿಜ್ಞಾನಿಗಳ ನಡುವೆ ಹೆಚ್ಚಿದ ಕುತೂಹಲ