ಬೆಂಗಳೂರು: ಕರೊನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ನಾಳೆಯಿಂದ ಭಕ್ತರಿಗೆ ಇಸ್ಕಾನ್ ದೇವಾಲಯದ ದರ್ಶನವನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ.
ಇಸ್ಕಾನ್ ಮಂದಿರ ಅತೀ ಹೆಚ್ಚು ಮಂದಿ ಭಕ್ತರನ್ನು ಆಕರ್ಷಿಸುವ ಕೇಂದ್ರವಾಗಿದ್ದು, ವಿದೇಶಿಯರು ಸೇರಿದಂತೆ ರಾಷ್ಟ್ರದ ವಿವಿಧ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ಸಾರ್ವಜನಿಕರು ಆರೋಗ್ಯ ದೃಷ್ಟಿಯಿಂದ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
ರಾಜಾಜಿನಗರದ ಹರೇ ಕೃಷ್ಣ ಗಿರಿಯಲ್ಲಿರುವ ಇಸ್ಕಾನ್ ರಾಧಾ ಕೃಷ್ಣ ಮಂದಿರ ಹಾಗೂ ಕನಕಪುರ ರಸ್ತೆಯಲ್ಲಿರುವ ಇಸ್ಕಾನ್ ವೈಕುಂಠ ಗಿರಿ ಮಂದಿರಗಳನ್ನು ಮಾರ್ಚ್ 18, 2020ರ ಮುಂಜಾನೆಯಿಂದ ಮುಂದಿನ ಸೂಚನೆವರೆಗೂ ದರ್ಶನ ರದ್ದು ಪಡಿಸಲಾಗಿದೆ ಎಂದು ಮಂಡಳಿ ತಿಳಿಸಿದೆ.
ಭಕ್ತರಿಗೆ ದರ್ಶನ ರದ್ದುಪಡಿಸಿದ್ದರೂ ಅರ್ಚಕರು ದೇವರ ಪೂಜೆ ಹಾಗೂ ವಿವಿಧ ಸೇವೆಗಳನ್ನು ಮುಂದುವರೆಸುತ್ತಾರೆ. ಅಲ್ಲದೆ ಭಜನೆ ಹಾಗೂ ಕೀರ್ತನೆಗಳು ನಡೆಯುತ್ತವೆ. ಕಡಿಮೆ ಸಂಖ್ಯೆಯ ಭಕ್ತರು ಕೋರಿಕೆ ಸಲ್ಲಿಸಿದರೆ ವಿಶೇಷ ಪೂಜೆ ಹಾಗೂ ಕಾರ್ಯಕ್ರಮಗಳಲ್ಲಿ ಆಹ್ವಾನ ನೀಡಲಾಗುತ್ತದೆ ಎಂದು ತಿಳಿಸಿದೆ.
ಭಕ್ತರು ಹೆಚ್ಚಿನ ವಿವರಗಳಿಗಾಗಿ ಕುಲಶೇಕರ ಚೈತನ್ಯ ದಾಸ. 9379464312 ಸಂಪರ್ಕಿಸಬಹುದು.