ಮುಂಬೈ: ಟೀಮ್ ಇಂಡಿಯಾದಿಂದ ಹೊರಗುಳಿದಿರುವ ಕ್ರಿಕೆಟಿಗರು ಫಿಟ್ ಆಗಿದ್ದರೂ, ದೇಶೀಯ ಟೂರ್ನಿಗಳಲ್ಲಿ ಭಾಗವಹಿಸದೆ ಐಪಿಎಲ್ಗೆ ಹೆಚ್ಚಿನ ಆದ್ಯತೆ ನೀಡುವುದನ್ನು ತಪ್ಪಿಸಲು ಹೊಸ ನಿಯಮ ಜಾರಿಗೊಳಿಸಲು ಬಿಸಿಸಿಐ ಚಿಂತನೆ ನಡೆಸಿದೆ. ಪ್ರಸ್ತುತ ಟೀಮ್ ಇಂಡಿಯಾದಿಂದ ಹೊರಗಿರುವ ಜಾರ್ಖಂಡ್ ವಿಕೆಟ್ ಕೀಪರ್-ಬ್ಯಾಟರ್ ಇಶಾನ್ ಕಿಶನ್ ಪ್ರಥಮ ದರ್ಜೆ ಪಂದ್ಯ ಆಡಲು ನಿರಾಕರಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ, ಇನ್ನು ಮುಂದೆ, ರಾಷ್ಟ್ರೀಯ ತಂಡದ ಸೇವೆಯಲ್ಲಿರದ ಆಟಗಾರರು ಐಪಿಎಲ್ನಲ್ಲಿ ಅಥವಾ ಅದರ ಹರಾಜಿನಲ್ಲಿ ಭಾಗವಹಿಸಬೇಕಾದರೆ, ರಣಜಿ ಟ್ರೋಫಿಯಲ್ಲಿ ಕನಿಷ್ಠ 3 ರಿಂದ 4 ಪಂದ್ಯ ಆಡುವುದನ್ನು ಕಡ್ಡಾಯಗೊಳಿಸಲು ಮುಂದಾಗಿದೆ.
ಪಾಂಡ್ಯ ಸಹೋದರರು ಹಾಗೂ ದೀಪಕ್ ಚಹರ್ ಸೇರಿ ಕೆಲ ಆಟಗಾರರು ದೇಶೀಯ ಟೂರ್ನಿಯನ್ನು ಕಡೆಗಣಿಸಿ ಐಪಿಎಲ್ ಟೂರ್ನಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಮಾರ್ಚ್ನಲ್ಲಿ ಆರಂಭವಾಗಲಿರುವ ಟಿ20 ್ರಾಂಚೈಸಿ ಲೀಗ್ಗೆ ಕೆಲ ಯುವ ಆಟಗಾರರು ಸೇರಿ ಟೀಮ್ ಇಂಡಿಯಾದಲ್ಲಿ ಈಗಾಗಲೆ ಗುರುತಿಸಿಕೊಂಡಿರುವ ಆಟಗಾರರು ಜನವರಿಯಿಂದ ತಯಾರಿ ಆರಂಭಿಸಿದ್ದಾರೆ. ಇವೆಲ್ಲವನ್ನೂ ಗಮನಿಸಿರುವ ಬಿಸಿಸಿಐ, ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಆಡುವ ಕ್ರಿಕೆಟಿಗರು ರಣಜಿ ಟೂರ್ನಿ ಪಂದ್ಯಗಳಿಂದ ದೂರವುಳಿಯುತ್ತಿದ್ದಾರೆ. ಆದ್ದರಿಂದ ರಣಜಿ ಪಂದ್ಯಗಳು ಆಡುವುದು ಕಡ್ಡಾಯಗೊಳಿಸುವ ನಿರೀಕ್ಷೆ ಇದೆ. ಒಂದು ವೇಳೆ ಆಟಗಾರರು ಫಿಟ್ನೆಸ್ ಹೊಂದಿದ್ದು ದೇಶೀಯ ಕ್ರಿಕೆಟ್ನಿಂದ ದೂರವುಳಿದರೆ ಅಂಥ ಅಟಗಾರರನ್ನು ಐಪಿಎಲ್ ಟೂರ್ನಿ ಹಾಗೂ ಹರಾಜು ಪ್ರಕ್ರಿಯೆಯಲ್ಲಿ ಹೆಸರು ನೋಂದಾಯಿಸಲು ಅನರ್ಹಗೊಳಿಸಲಾಗುವುದು ಎಂದು ವರದಿಯಾಗಿದೆ. ಬೆಂಗಳೂರಿನ ಎನ್ಸಿಎ ಹಾಗೂ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಆಟಗಾರರಿಗೆ ಮಾತ್ರ ಈ ನಿಯಮದಿಂದ ವಿನಾಯಿತಿ ನೀಡುವ ಸಾಧ್ಯತೆಗಳಿವೆ.
ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮಾನಸಿಕ ಆರೋಗ್ಯ ನೆಪವೊಡ್ಡಿ ತವರಿಗೆ ಹಿಂತಿರುಗಿದ್ದ ಇಶಾನ್ ಕಿಶನ್ಗೆ ರಣಜಿ ಟೂರ್ನಿಯ ಮುಂದಿನ ಸುತ್ತಿನಲ್ಲಿ ಜಾರ್ಖಂಡ್ ಪರ ಆಡುವಂತೆ ಬಿಸಿಸಿಐ ತಿಳಿಸಿದೆ. ಆದರೆ ಇಶಾನ್ ಕಿಶನ್ ತನ್ನ ರಾಜ್ಯ ತಂಡದ ಸಂಪರ್ಕಕ್ಕೆ ಸಿಕ್ಕಿಲ್ಲ ಎನ್ನಲಾಗಿದ್ದು, ಇಶಾನ್ ರಣಜಿ ಪಂದ್ಯ ಆಡುವರೇ ಎಂಬುದು ಕುತೂಹಲ ಮೂಡಿಸಿದೆ. ಪ್ರಸ್ತುತ ಬರೋಡದಲ್ಲಿ ತರಬೇತಿ ಪಡೆಯುತ್ತಿರುವ ಕಿಶನ್ ರಣಜಿ ಆಡಲು ನಿರಾಕರಿಸಿದರೆ ಮುಂಬರುವ ದಿನಗಳಲ್ಲಿ ಬಿಸಿಸಿಐ ಆಟಗಾರರ ವಾರ್ಷಿಕ ಗುತ್ತಿಗೆ ಪಟ್ಟಿಯಿಂದಲೂ ಅವರನ್ನು ಕೈ ಬಿಡಲಾಗುವುದು ಎನ್ನಲಾಗಿದೆ.