ಬೆಂಗಳೂರು: ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಕಾಮಗಾರಿಗಳಲ್ಲಿ ಆರ್ಥಿಕ ಅಶಿಸ್ತು, ಅವ್ಯವಹಾರ, ವಿಳಂಭ ಧೋರಣೆ, ಕಾನೂನು ಉಲ್ಲಂಘನೆ ಆರೋಪದ ಮೇಲೆ ಐಎಎಸ್ ಅಧಿಕಾರಿಗಳು ಸೇರಿದಂತೆ ವಿವಿಧ ವೃಂದದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಹಾಗೂ ಸಿವಿಲ್ ಮೊಕದ್ದಮೆ ಹೂಡಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ಉಗ್ರಾಣ ನಿಮಗದಲ್ಲಿ 2015-16 ರಲ್ಲಿ ನಡೆದಿರುವ ಹಣ ದುರ್ಬಳಕೆಯನ್ನು ಸಚಿವ ಸಂಪುಟ ಸಭೆ ಗಂಭೀರವಾಗಿ ಪರಿಗಣಿಸಿ ಈ ನಿರ್ಧಾರ ಕೈಗೊಂಡಿದೆ.
ಸಚಿವ ಸಂಪುಟ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ, ಉಗ್ರಾಣ ನಿರ್ಮಾಣ ಅಪೂರ್ಣಗೊಂಡು ಆರ್ಥಿಕ ಅಶಿಸ್ತು ಕಂಡು ಬಂದಿತ್ತು. ಅದರ ಜತೆ ಹಲವಾರು ಅಧಿಕಾರಿಗಳು ಬಹಳಷ್ಟು ಅವ್ಯವಹಾರ ಎಸಗಿರುವುದು, ಕಾನೂನು ಬಾಹಿರ ಕೃತ್ಯ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ನಿರ್ಣಯಿಸಲಾಗಿದೆ. ಐಎಎಸ್ ಅಧಿಕಾರಿ ರಾಜೇಶ್ಗೌಡ, ಜಯವಿಭವಸ್ವಾಮಿ, ಎಸ್.ನವೀನ್ಕುಮಾರ್, ಲೋಕೋಪಯೋಗಿ ಇಲಾಖೆ ಅಧೀಕ್ಷಕ ಎಂಜಿನಿಯರ್ ಹನುಮಂತರಾಯಪ್ಪ, ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಎಸ್.ಅಲಿಪುರ ಅವರ ವಿರುದ್ಧ ಹಾಗೂ ಕಾಮಗಾರಿ ವಿಳಂಬಕ್ಕೆ ಕಾರಣರಾದ ಸಹಕಾರ ಇಲಾಖೆ ಅಧಿಕಾರಿಗಳ ವಿರುದ್ಧ ಕೂಡ ಸೂಕ್ತ ಕ್ರಮಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಹೇಳಿದರು.
ಆರೋಪ ಏನು?
ಅಧಿಕಾರಿಗಳು ಉಗ್ರಾಣ ಅಪೂರ್ಣಗೊಳ್ಳಲು ಹಾಗೂ ವಿಳಂಬಕ್ಕೆ ಕಾರಣರಾಗಿರುವುದಲ್ಲದೆ, ಗುತ್ತಿಗೆದಾರರಿಗೆ ನಿಯಮ ಮೀರಿ ಹಣ ಪಾವತಿ ಮಾಡಿದ್ದಾರೆ. ಕೆಲವು ಪ್ರಕರಣಗಳಲ್ಲಿ ಶೇ.80 ರಷ್ಟು
ಹಣವನ್ನು ಮುಂಗಡ ನೀಡಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿದೆ ಎಂದು ತಿಳಿಸಿದರು.
862 ಕೋಟಿ ಪರಿಷ್ಕೃತ ಅಂದಾಜು
163 ಉಗ್ರಾಣಗಳ ನಿರ್ಮಾಣ ಕಾರ್ಯ ಹಾಗೂ 89ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ 87 ಉಗ್ರಾಣ ಹಾಗೂ 40 ಮೂಲಸೌಕರ್ಯ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಯೋಜನೆಯ ಒಟ್ಟು ವೆಚ್ಚ 862.37 ಕೋಟಿ ರೂ. ಪರಿಷ್ಕೃತ ಅಂದಾಜು ಮಾಡಲಾಗಿದೆ. ಮಧ್ಯಸ್ಥಿಕೆ ತೀರ್ಪಿನ ಪ್ರಕಾರ ಸಂಧಾನದಲ್ಲಿ ಒಪ್ಪಿರುವಂತೆ ಗುತ್ತಿಗೆದಾರರಿಗೆ ಪಾವತಿ ಮಾಡಲು 126.34 ಕೋಟಿ ರೂ., ಮಧ್ಯಸ್ಥಿಕೆ ಕ್ಲೇಮು 434.95 ಕೋಟಿ ರೂ. ಇದೆ.
2023-24ನೇ ಸಾಲಿನಲ್ಲಿ ಗುತ್ತಿಗೆದಾರರಿಗೆ ಮೊದಲಿನ ಕಾಮಗಾರಿಗಳಿಗೆ ಪಾವತಿಸಲು 129.09 ಕೋಟಿ ರೂ., ಅಪೂರ್ಣಗೊಂಡಿರುವ ಕಾಮಗಾರಿ ಪೂರ್ಣಗೊಳಿಸಲು 80 ಕೋಟಿ ರೂ. ಬಿಡುಗಡೆ ಮಾಡಲು ಸಚಿವ ಸಂಪುಟ ಸಭೆ ಒಪ್ಪಿದೆ ಎಂದು ವಿವರಿಸಿದರು.