ಟೆಹರಾನ್: ಇರಾನ್ ಸೇನಾ ನಾಯಕನ ವಿರುದ್ಧ ಅಮೆರಿಕ ಕೈಗೊಂಡ ‘ಭಯೋತ್ಪಾದನೆ ದಾಳಿ ಅಪರಾಧ’ಕ್ಕೆ ತಕ್ಕ ತಿರುಗೇಟು ನೀಡಲು ಪ್ರಾರಂಭಿಸಿದ್ದೇವೆ. 12ಕ್ಕೂ ಅಧಿಕ ಕ್ಷಿಪಣಿಗಳು ಗುರಿಯನ್ನು ಭೇದಿಸಿವೆ. ಅಮೆರಿಕದ ವಾಯುನೆಲೆಗಳು ಧ್ವಂಸವಾಗಿದೆ ಎಂದು ಇರಾನ್ ಹೇಳಿದೆ. ಅಮೆರಿಕ ಸೊಕ್ಕಿನ ಕೃತ್ಯಗಳನ್ನು ಬಿಡದಿದ್ದರೆ ಇನ್ನಷ್ಟು ಯಾತನೆ ಮತ್ತು ವಿನಾಶಕಾರಿ ಘಟನೆಗಳನ್ನು ಅನುಭವಿಸಬೇಕಾಗುತ್ತದೆ. ಇರಾನ್ ವಿರುದ್ಧ ಕಾರ್ಯಾಚರಣೆಗೆ ಅಮೆರಿಕದ ಭಯೋತ್ಪಾದಕ ಸೇನೆಗೆ ನೆಲೆ ನೀಡುವ ರಾಷ್ಟ್ರಗಳು ಜಾಗೃತೆ ವಹಿಸಬೇಕು. ಅಮೆರಿಕದ ಸಲುವಾಗಿ ಆ ರಾಷ್ಟ್ರಗಳು ಅಪಾಯಕ್ಕೆ ಸಿಲುಕಿಕೊಳ್ಳಬಾರದು ಎಂದಿದೆ.
ಅಮೆರಿಕದ ಜನರು ತಮ್ಮ ಆಡಳಿತಗಾರನ ಮೇಲೆ ಒತ್ತಡ ತಂದು ಮಧ್ಯಪ್ರಾಚ್ಯದಿಂದ ಸೇನೆಯನ್ನು ವಾಪಸು ಕರೆಯಿಸಿಕೊಳ್ಳದಿದ್ದರೆ ಅಮೆರಿಕದ ವಿರುದ್ಧದ ಸೇಡು ಮತ್ತಷ್ಟು ತೀವ್ರವಾಗುತ್ತದೆ ಎಂದು ಇರಾನ್ ಎಚ್ಚರಿಕೆ ನೀಡಿದೆ.
ಇರಾಕ್ ಪ್ರಯಾಣ ಬೇಡವೆಂದ ಭಾರತ: ಯುದ್ಧದ ಆತಂಕ ಎದುರಾಗಿರುವ ಕಾರಣ ಇರಾಕ್, ಇರಾನ್ಗೆ ಭೇಟಿ ನೀಡುವುದನ್ನು ಸಾಧ್ಯವಾದಷ್ಟು ರದ್ದು ಮಾಡಿ. ಈ ದೇಶಗಳಿಗೆ ಅನಗತ್ಯ ಭೇಟಿ ನೀಡಬೇಡಿ ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಬಾಗ್ದಾದ್ನಲ್ಲಿರುವ ರಾಯಭಾರ ಕಚೇರಿ ಮತ್ತು ಎರ್ಬಿಲ್ನಲ್ಲಿರುವ ಕಾನ್ಸುಲೇಟ್ ಕಚೇರಿಗಳು ಎಂದಿನಂತೆ ಬುಧವಾರ ಕಾರ್ಯ ನಿರ್ವಹಿಸಿವೆ.
- ಬುಧವಾರದ ಬೆಳವಣಿಗೆ
ಎರ್ಬಿಲ್ನಲ್ಲಿರುವ ಜರ್ಮನಿಯ 115 ಯೋಧರು ಸುರಕ್ಷಿತ ಎಂದು ಜರ್ಮನ್ ವಕ್ತಾರರ ಹೇಳಿಕೆ.
ಝಇರಾಕ್ನಿಂದ ನೂರಾರು ಸಮರ ತರಬೇತಿ ಸಿಬ್ಬಂದಿಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಲಾಗಿದೆ ಎಂದ ನ್ಯಾಟೋ. - ಇರಾಕ್ನಲ್ಲಿದ್ದ 500ಕ್ಕೂ ಹೆಚ್ಚು ಯೋಧರನ್ನು ಕುವೈತ್ನ ಸುರಕ್ಷಿತ ಸ್ಥಳಕ್ಕೆ ರವಾನಿಸಿದ ಕೆನಡಾ.
ಝಮಧ್ಯಪ್ರಾಚ್ಯದಲ್ಲಿನ ಆತಂಕದ ಬೆಳವಣಿಗೆಗಳು ಯಾವ ದೇಶಕ್ಕೆ ಒಳಿತಲ್ಲ. ಕೊಲ್ಲಿ ಪ್ರಾದೇಶಿಕದಲ್ಲಿ ಶಾಂತಿ ಕಾಪಾಡಿ, ಸಂಯಮದಿಂದ ವರ್ತಿಸಿ ಎಂದ ಚೀನಾ. - ಇರಾಕ್ ನಮ್ಮ ಮೇಲೆ ದಾಳಿ ನಡೆಸುವ ಹುಂಬತನ ತೋರಿದರೆ ತೀವ್ರ ಆಘಾತಕಾರಿ ಪ್ರತಿಕ್ರಿಯೆಯನ್ನು ಎದುರಿಸಬೇಕಾದೀತು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ.
- ಅಮೆರಿಕದ ವಾಯನೆಲೆ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿಯನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಖಂಡಿಸಿವೆ.
ವಿಮಾನ ಮಾರ್ಗ ಬದಲಿಸಲು ಸೂಚನೆ: ಮಧ್ಯಪ್ರಾಚ್ಯದಲ್ಲಿ ಬಿಗುವಿನ ವಾತಾವರಣ ಇರುವ ಕಾರಣ ಇರಾಕ್, ಇರಾನ್ ಮತ್ತು ಒಮನ್ ಕೊಲ್ಲಿ, ಪರ್ಷಿಯನ್ ಕೊಲ್ಲಿಯ ವಾಯುಮಾರ್ಗವನ್ನು ಬಳಸದಂತೆ ಅಮೆರಿಕದ ಫೆಡರಲ್ ನಾಗರಿಕ ವಿಮಾನಯಾನ ಆಡಳಿತ ಸೂಚನೆ ನೀಡಿದೆ. ಸಿಂಗಾಪುರ ಏರ್ಲೈನ್ಸ್ ಈಗಾಗಲೇ ಇರಾನ್ ವಾಯುಮಾರ್ಗದ ಬಳಕೆ ನಿಲ್ಲಿಸಿದೆ. ಭಾರತ ಕೂಡ ತನ್ನೆಲ್ಲ ವಿಮಾನಗಳಿಗೆ ಈ ವಾಯು ಪ್ರದೇಶದಲ್ಲಿ ಸಂಚರಿಸುವಾಗ ಅತಿ ಹೆಚ್ಚು ಜಾಗೃತೆ ವಹಿಸುವಂತೆ ಸೂಚಿಸಿದೆ.
ಭಟ್ಕಳದಲ್ಲಿ ತಳಮಳ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಭಟ್ಕಳಿಗರಲ್ಲಿ ಆತಂಕ ಮೂಡಿದ್ದು, ಪರಿಸ್ಥಿತಿ ಶಾಂತವಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ಇರಾಕ್, ಕುವೈತ್ನಲ್ಲಿ ಅಮೆರಿಕದ ಸೇನಾನೆಲೆಗಳಿವೆ. ಇವುಗಳ ಮೇಲೆ ದಾಳಿ ನಡೆಸುವುದಾಗಿ ಇರಾನ್ ಎಚ್ಚರಿಸಿದೆ. ಭಟ್ಕಳದ 200ಕ್ಕೂ ಅಧಿಕ ಮಂದಿ ಇಲ್ಲಿ ನೆಲೆಸಿದ್ದು, ಅವರ ಸಂಬಂಧಿಕರು ಆತಂಕಿತರಾದ್ದಾರೆ. ಸದ್ಯ ಕುವೈತ್ನಲ್ಲಿ ಜನಜೀವನ ಸಹಜ ಸ್ಥಿತಿಯಲ್ಲಿದ್ದು ಮಾರುಕಟ್ಟೆಯಲ್ಲೂ ಪರಿಣಾಮ ಬೀರಿಲ್ಲ ಎಂದು ಭಟ್ಕಳ ಮೂಲದ ಕುವೈತ್ ಉದ್ಯೋಗಿಯೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.