ಬೆಂಗಳೂರು: ಜೆಡಿಎಸ್ ಶಾಸಕ ಸಾರಾ ಮಹೇಶ್ ಜೊತೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರು ಸಂಧಾನ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವ ಬೆನ್ನಲ್ಲೇ ರೋಹಿಣಿ ಸಿಂಧೂರಿ ವಿರುದ್ಧ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಅವರು ಫೇಸ್ಬುಕ್ ಮೂಲಕ ಸಮರ ಸಾರಿದ್ದು, ಪ್ರಶ್ನೆಗಳ ಸುರಿಮಳೆಗೈದಿದ್ದರು. ಬಳಿಕ ರೋಹಿಣಿ ಸಿಂಧೂರಿ ಅವರ ಕೆಲ ಫೋಟೋಗಳನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ್ದರು.
ಇದೀಗ ಈ ವಿಚಾರವಾಗಿ ಐಪಿಎಸ್ ಅಧಿಕಾರಿ ಡಿ. ರೂಪ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಐಎಎಸ್ ಅಧಿಕಾರಿಯಾಗಿ ಉನ್ನತ ಹುದ್ದೆಯಲ್ಲಿರುವ ರೋಹಿಣಿ ಸಿಂಧೂರಿ ಅವರು ಶಾಸಕರೊಂದಿಗೆ ಸಂಧಾನಕ್ಕೆ ಯಾಕೆ ಹೋದರು? ಇದೇ ಮೊದಲ ಬಾರಿಗೆ ಐಎಎಸ್ ಅಧಿಕಾರಿಯೊಬ್ಬರು ಸಂಧಾನಕ್ಕೆ ಹೋಗುವ ಕೆಲಸ ಮಾಡಿರುವುದು ಎಂದರು.
ರೋಹಿಣಿ ಸಿಂಧೂರಿ ಅವರಿಗೆ ಆರಂಭದಲ್ಲಿ ನಾನು ಅವರಿಗೆ ಸಾಕಷ್ಟು ಸಹಾಯ ಮಾಡಿದ್ದೇನೆ. ಡಿ.ಕೆ.ರವಿ ಆತ್ಮಹತ್ಯೆಯ ವಿಚಾರ ಬಂದಾಗಲೇ ರೋಹಿಣಿ ಸಿಂಧೂರಿ ಎಡವಿದ್ದರು. ಅವತ್ತೇ ನಾನು ನಾನು ಮಾತನಾಡಿದ್ದೆ ಎಂದು ಹೇಳಿದರು.
ಈ ವಿಚಾರವೆಲ್ಲಾ ಈಗ ಯಾಕೆಂದು ಪ್ರಶ್ನೆ ಮೂಡುವುದು ಸಹಜ. ರೋಹಿಣಿ ಸಿಂಧೂರಿ ಅವರ ಫೋಟೋಗಳನ್ನು ಇಷ್ಟು ತಡವಾಗಿ ಯಾಕೆ ಬಿಡುಗಡೆ ಮಾಡಿದ್ದೀರಿ ಎಂದು ಕೇಳಬಹುದು. ಈ ಫೋಟೋಗಳು ನನಗೆ ಲಭ್ಯವಾದ್ದೇ ಈಗ. ಕೂಡಲೇ ಕೆಲ ಫೋಟೋಗಳನ್ನು ಬಹಿರಂಗಗೊಳಿಸಿದ್ದೇನೆ. ಲಭ್ಯವಾಗಿರುವ ಎಲ್ಲ ಫೋಟೋಗಳನ್ನು ಸರ್ಕಾರಕ್ಕೆ ಕೊಡುತ್ತೇನೆ. ಇಂತಹ ಫೋಟೋಗಳು ಓರ್ವ ಐಎಎಸ್ ಅಧಿಕಾರಿ ಪುರುಷ ಅಧಿಕಾರಿಗೆ ಕಳಿಸುತ್ತಾರೆ. ಇದರ ಅರ್ಥ ಏನು? ಎಂದು ಪ್ರಶ್ನಿಸಿದರು.
ಎಲ್ಲಾ ವಿಚಾರಗಳು ಸರಿಯಾದ ಕ್ರಮದಲ್ಲಿ ತನಿಖೆ ಆಗಬೇಕು. ಕರೊನಾ ಸಮಯದಲ್ಲಿ ಸ್ವಿಮಿಂಗ್ ಪೂಲ್ ಕಟ್ಟಿಸಿಕೊಂಡಿದ್ದರು. ಆ ಸಂದರ್ಭದಲ್ಲಿ ಇದೆಲ್ಲ ಬೇಕಿತ್ತಾ? ಯಾರು ಇವರಿಗೆ ಅಷ್ಟೋಂದು ಸಪೋರ್ಟ್ ಮಾಡುತ್ತಿದ್ದಾರೆ ಎಂಬುದು ಗೊತ್ತಿಲ್ಲ. ಯಾವುದೇ ತಪ್ಪು ಮಾಡಿದರೂ ಶಿಕ್ಷೆ ಮಾತ್ರ ಆಗುತ್ತಿಲ್ಲ. ಇವರ ಹಿಂದೆ ಯಾರಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ರೋಹಿಣಿ ಸಿಂಧೂರಿ ಅವರ ಮೇಲೆ ನನಗೆ ಯಾವುದೇ ವೈಯಕ್ತಿಕ ದ್ವೇಷ ಇಲ್ಲ ಎಂದು ರೂಪ ಮೌದ್ಗಿಲ್ ಹೇಳಿದರು.