ಬೆಂಗಳೂರು: ವಿದೇಶದಲ್ಲಿರುವ ಗೆಳೆಯನಿಂದ ಕರೆ ಬಂದರೆ ಓಕೆ, ಆದರೆ ಮೆಸೇಜ್ ಬಂದರೆ ಹುಷಾರು! ಅದರಲ್ಲೂ ಮೆಸೇಜ್ ಮಾಡಿ, ‘ಆರಾಮ್ ಇಲ್ಲ, ಆಸ್ಪತ್ರೆಯಲ್ಲಿದ್ದೇನೆ, ಹಣ ಕಳಿಸು..’ ಎಂದು ಕೇಳಿಕೊಂಡರೆ ಯಾವುದಕ್ಕೂ ಒಮ್ಮೆ ಫ್ರೆಂಡ್ಗೆ ನೇರ ಕರೆ ಮಾಡಿಯೇ ಖಚಿತಪಡಿಸಿಕೊಳ್ಳಿ. ಏಕೆಂದರೆ ವಿದೇಶದಲ್ಲಿರುವವರ ಮೊಬೈಲ್ಫೋನ್ ಹ್ಯಾಕ್ ಮಾಡುತ್ತಿರುವ ಕಳ್ಳರು ಅದರಿಂದ ಅವರ ಬಾಲ್ಯದ ಗೆಳೆಯರಿಗೆ ಮೆಸೇಜ್ ಕಳಿಸಿ ಲಕ್ಷಾಂತರ ರೂಪಾಯಿ ವಂಚನೆ ಎಸಗುತ್ತಿದ್ದಾರೆ. ವೈಟ್ಫೀಲ್ಡ್ ವಿಭಾಗ ಸಿಇಎನ್ ಠಾಣೆಯಲ್ಲಿ ಅಂಥ ಎರಡು ಪ್ರಕರಣಗಳು ದಾಖಲಾಗಿವೆ.
ವೈಟ್ಫೀಲ್ಡ್ನ ಅಪಾರ್ಟ್ಮೆಂಟ್ನಲ್ಲಿ ನೆಲೆಸಿರುವ ವ್ಯಕ್ತಿಯ ಬಾಲ್ಯ ಸ್ನೇಹಿತ ಮಲೇಷ್ಯಾದಲ್ಲಿ ನೆಲೆಸಿದ್ದಾರೆ. ಸಮಯ ಸಿಕ್ಕಾಗ ಇಬ್ಬರೂ ಮೊಬೈಲ್ಫೋನ್ನಲ್ಲಿ ಸಂಭಾಷಣೆ ನಡೆಸುತ್ತಿದ್ದರು. ಏಪ್ರಿಲ್ 29ರಂದು ಮಲೇಷ್ಯಾದಲ್ಲಿ ಇರುವ ವ್ಯಕ್ತಿಯ ಮೊಬೈಲ್ಫೋನ್ ನಂಬರ್ ಹ್ಯಾಕ್ ಮಾಡಿರುವ ಸೈಬರ್ ಕಳ್ಳರು, ಬೆಂಗಳೂರಿನ ಈ ವ್ಯಕ್ತಿಗೆ ಸಂದೇಶ ಕಳುಹಿಸಿದ್ದಾರೆ. ಅನಾರೋಗ್ಯಕ್ಕೆ ಒಳಗಾಗಿದ್ದು, ತುರ್ತಾಗಿ ಹಣ ಬೇಕೆಂದು ಮನವಿ ಮಾಡಿದ್ದಾರೆ. ಬಾಲ್ಯ ಸ್ನೇಹಿತ ಕಷ್ಟದಲ್ಲಿ ಇದ್ದಾನೆ ಎಂಬ ಕಾರಣಕ್ಕೆ ಆತನ ಬ್ಯಾಂಕ್ ಖಾತೆಗೆ 98 ಸಾವಿರ ರೂ. ಜಮೆ ಮಾಡಿದ್ದಾರೆ. ಇದಾದ ಮೇಲೆ ಬಾಲ್ಯ ಸ್ನೇಹಿತ ಸಂಪರ್ಕ ಮಾಡಿದ್ದಾಗ ಹಣ ಕೇಳಿಯೇ ಇಲ್ಲ. ಹಣ ಜಮೆ ಆಗಿರುವ ಬ್ಯಾಂಕ್ ಖಾತೆ ತನ್ನದಲ್ಲ ಎಂದು ಖಚಿತ ಪಡಿಸಿದ್ದಾರೆ. ಸೈಬರ್ ಕಳ್ಳರು ಮೊಬೈಲ್ ನಂಬರ್ ಹ್ಯಾಕ್ ಮಾಡಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಡಿಸೆಂಬರ್ವರೆಗೂ ಇರುತ್ತೆ ಈ ಕರೊನಾ ಕಾಟ: ಎಚ್ಚರಿಕೆ ನೀಡಿದ ಡಾ. ಮಂಜುನಾಥ್
ಅಮೆರಿಕ ಸ್ನೇಹಿತನ ಸೋಗಲ್ಲಿ 7 ಲಕ್ಷ ಧೋಖಾ: ಮಾರತ್ಹಳ್ಳಿಯ ಉದ್ಯಮಿಗೆ ಅಮೆರಿಕದ ಸ್ನೇಹಿತನ ಸೋಗಿನಲ್ಲಿ ಸಂದೇಶ ಕಳುಹಿಸಿ ಅವರಿಂದ 7 ಲಕ್ಷ ರೂ. ಪಡೆದು ಸೈಬರ್ ಕಳ್ಳರು ವಂಚನೆ ಮಾಡಿದ್ದಾರೆ.
ಅಮೆರಿಕದ ಸ್ನೇಹಿತ ಸಂಜಯ್ ಸಿಂಗ್ ಹೆಸರಿನಲ್ಲಿ ಸಂದೇಶ ಕಳುಹಿಸಿ ಆಸ್ಪತ್ರೆಯಲ್ಲಿ ಇದ್ದಾನೆ. ಸರ್ಜರಿ ನಡೆಯುತ್ತಿದೆ. ತಕ್ಷಣ ಹಣ ಬೇಕೆಂದು ಉದ್ಯಮಿಗೆ ಸಂದೇಶ ಕಳುಹಿಸಿದ್ದಾನೆ. ಹಳೆಯ ಸ್ನೇಹಿತ ಕಷ್ಟದಲ್ಲಿ ಇದ್ದಾನೆ ಎಂದು ಹಂತ ಹಂತವಾಗಿ 7 ಲಕ್ಷ ರೂ. ಬ್ಯಾಂಕ್ಗೆ ಜಮೆ ಮಾಡಿದ್ದಾರೆ. ಕೊನೆಗೊಂದು ದಿನ ಕರೆ ಮಾಡಿ ವಿಚಾರಿಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ನೊಂದ ಉದ್ಯಮಿ ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.