More

    ಪುನರ್ವಸತಿ ಕೇಂದ್ರದಲ್ಲಿ ಸಮಗ್ರ ವ್ಯವಸ್ಥೆ | ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ

    ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಯಿಂದ ಜಮೀನು, ಮನೆ ಕಳೆದುಕೊಂಡಿರುವವರಿಗೆ ಪರಿಹಾರದ ದರವನ್ನು ಏಕ ಸ್ವರೂಪಗೊಳಿಸಿ, ಪರಿಹಾರದ ತಾರತಮ್ಯ ಸರಿಪಡಿಸಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿ, ಒಣ ಬೇಸಾಯಕ್ಕೆ 2 ಲಕ್ಷದಿಂದ ಗರಿಷ್ಠ 20 ಲಕ್ಷ ರೂ. ವರೆಗೆ ಪರಿಹಾರ ನೀಡಲಾಗುತ್ತಿದೆ. ರೈತರಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

    ಗುರುವಾರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿ ಗ್ರಾಮದ ಕೃಷ್ಣಾ ನಗರ ಸಿಬಿಎಸ್‌ಇ ಸ್ಕೂಲ್ನ ಆವರಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 3ನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆಯಡಿಯಲ್ಲಿ ಭೂಮಿಯನ್ನು ಕಳೆದುಕೊಂಡಂತಹ ರೈತರಿಗೆ ಪರಿಹಾರ ವಿತರಣೆಮಾಡಿ ಮಾತನಾಡಿದರು.

    ನಾಲ್ಕೈದು ಹಳ್ಳಿಗಳಲ್ಲಿ ಪುನರ್ವಸತಿ ಕೇಂದ್ರಗಳನ್ನು ಅಕ್ಕಪಕ್ಕದಲ್ಲಿಯೇ ನಿರ್ಮಿಸಿ, ಜನರಿಗೆ ಮೂಲ, ಸಾಮಾನ್ಯ ವ್ಯವಸ್ಥೆಗಳನ್ನು ನೀಡುವ ಜೊತೆಗೆ ಶಾಲೆ, ಕಾಲೇಜು, ಪಾಲಿಟೆಕ್ನಿಕ್ ಕಾಲೇಜುಗಳನ್ನೂ ನಿರ್ಮಿಸುವ ಮೂಲಕ ಸಂತ್ರಸ್ತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.

    ಭೂಸ್ವಾಧೀನಕ್ಕೆ ಜಮೀನು ಮನೆ ಕೊಡಲು ಇಚ್ಛಿಸದವರು ಭೂ ಸ್ವಾಧೀನದ ವಿರುದ್ಧ ನ್ಯಾಯಾಲಯಕ್ಕೆ ಹೋಗುವ ಅವಕಾಶದ ಬಗ್ಗೆ ಕಾನೂನು ತಜ್ಞರ ಸಲಹೆ ಪಡೆಯಲಾಗುವುದು. ಆರ್ ಆ್ಯಂಡ್ ಆರ್ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಮುಳವಾಡಿ, ಚಿಮ್ಮಲಗಿ ಏತ ನೀರಾವರಿ ಪ್ರದೇಶದಲ್ಲಿ 15 ಲಕ್ಷ ಎಕರೆ ಜಮೀನಿಗೆ ನೀರು ಒದಗಿಸಲಾಗುವುದು. ರೇವಣಸಿದ್ಧೇಶ್ವರ ಏತ ನೀರಾವರಿಗೆ ಅಡಿಗಲ್ಲು ಹಾಕಲಾಗಿದೆ ಎಂದು ತಿಳಿಸಿದರು.

    ಮನೆಗಳ ನಿರ್ಮಾಣಕ್ಕೆ ವಿಶೇಷ ಯೋಜನೆ: ಪುನರ್ವಸತಿ ಮತ್ತು ಪುನರ್ನಿರ್ಮಾಣಕ್ಕೆ ಸಂಬಂಧಿಸಿದಂತೆ, ಯೋಜನೆಗಳಿಗೆ ಜಮೀನು ಕಳೆದುಕೊಳ್ಳುವ ರೈತರ ಬದುಕು ಉತ್ತಮವಾಗಿ ರೂಪುಗೊಳ್ಳಬೇಕೆಂಬುದು ನಮ್ಮ ನೀತಿ. ಪುನರ್ವಸತಿ ಕೇಂದ್ರದಲ್ಲಿ ಮೂಲ ಸೌಕರ್ಯ, ಶಾಲೆ, ರಸ್ತೆಗಳಿಲ್ಲ ಎಂದು ಹಲವು ದೂರುಗಳು ಬರುತ್ತಿವೆ. ಮನೆ ಕಳೆದುಕೊಳ್ಳುವವರಿಗೆ ಮನೆಯ ಪ್ರಸ್ತುತ ಬೆಲೆಯ ಜೊತೆಗೆ ಶೇ. 20ರಷ್ಟು ಪರಿಹಾರವನ್ನು ನೀಡುವ ಹೊಸ ಚಿಂತನೆ ಮಾಡಲಾಗಿದೆ. ಪುನರ್ವಸತಿ ಮತ್ತು ಪುನರ್ನಿರ್ಮಾಣ ಕೇಂದ್ರಗಳಲ್ಲಿ ನಷ್ಟ ಅನುಭವಿಸಿದವರಿಗೆ ಜಮೀನು ನೀಡುವುದರ ಜೊತೆಗೆ ಮನೆಯನ್ನು ನಿರ್ಮಿಸಿಕೊಡುವ ವಿಶೇಷ ಯೋಜನೆ ಕೈಗೊಳ್ಳಲಾಗುವುದು ಎಂದರು.

    ನೀರಾವರಿಗೆ ಹೆಚ್ಚಿನ ಪ್ರಾಶಸ್ತ್ಯ : ಕೃಷ್ಣೆಯ ತೀರದ ರೈತರು, ನದಿಯ ನೀರನ್ನು ಬಳಸುವ ವ್ಯವಸ್ಥೆ ಇರಲಿಲ್ಲ. ಇಲ್ಲಿನ ರೈತರ ಪ್ರಾಮಾಣಿಕರು ಮತ್ತು ಕಾಯಕ ನಿಷ್ಠೆಯುಳ್ಳವರು. ಕೃಷ್ಣೆಯ ನೀರು ಹಾಗೂ ಮಣ್ಣು ನಿಸರ್ಗ ಕೊಟ್ಟಿರುವ ವರವಾಗಿದ್ದು, ಗುಣಮಟ್ಟದ ಬೆಳೆಯನ್ನು ಇಲ್ಲಿ ಬೆಳೆಯಲಾಗುತ್ತದೆ. ವಿಜಯಪುರ, ಬೆಳಗಾವಿ, ಬಾಗಲಕೋಟೆಗಳಲ್ಲಿ ಉತ್ತಮ ಗುಣಮಟ್ಟದ ಕಬ್ಬನ್ನು ಬೆಳೆಯಲಾಗುತ್ತಿದೆ. ಪಂಚನದಿಗಳು ಹರಿಯುವ ಪ್ರದೇಶದಲ್ಲಿ ನೀರಾವರಿ ಸಮರ್ಥವಾಗಿಲ್ಲದಿರುವುದು ಚಿಂತನೆಯ ವಿಷಯವಾಗಿದ್ದು, ಈಗ ಪರಿಸ್ಥಿತಿ ಸುಧಾರಿಸುತ್ತಿದೆ. ಮೊದಲಿನಿಂದಲೂ ರಾಜ್ಯದಲ್ಲಿ ನೀರಾವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕಾಗಿತ್ತು. ಈಗಲಾದರೂ ನೀರಾವರಿ ಯೋಜನೆಗಳನ್ನೂ ಪೂರ್ಣಗೊಳಿಸಿ ಈ ಭಾಗದ ರೈತರಿಗೆ ನ್ಯಾಯ ಒದಗಿಸಬೇಕಿದೆ ಎಂದು ಹೇಳಿದರು.

    ರೈತರ ಹೊಲಗಳಿಗೆ ನೀರು : ನಾನು ನೀರಾವರಿ ಸಚಿವನಾಗಿದ್ದಾಗ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ‘ಎ’ ಮತ್ತು ‘ಬಿ’ ಸ್ಕೀಂ ಗಳೆಂದು ನನೆಗುದಿಗೆ ಬಿದ್ದಿದ್ದ ಒಂಬತ್ತು ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ್ದೇನೆ. ಮುಳವಾಡಿ, ಚಿಮ್ಮಲಗಿ, ಗುತ್ತಿಬಸವಣ್ಣ ಏತನೀರಾವರಿ, ಕೊಪ್ಪಳ ಏತ ನೀರಾವರಿ ಸೇರಿದಂತೆ ಹಲವು ಯೋಜನೆಗಳಿಗೆ ಅಡಿಗಲ್ಲು ಹಾಕಿ, ಪಂಪ್‌ಹೌಸ್‌ಗಳು ನಿರ್ಮಾಣಗೊಳಿಸಿ, ನೀರು ರೈತರ ಹೊಲಗಳಿಗೆ ನೀರು ಬಂದಾಗ ನಮ್ಮ ಸಂಕಲ್ಪ ಪೂರ್ಣಗೊಳ್ಳುತ್ತದೆ ಎಂದರು. ಜಲ ಸಂಪನ್ಮೂಲ ಸಚಿವ ಗೋವಿಂದ ಎಂ. ಕಾರಜೋಳ, ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಬಬಲೇಶ್ವರ ಕ್ಷೇತ್ರದ ಶಾಸಕ ಡಾ. ಎಂ.ಬಿ. ಪಾಟೀಲ, ಸಂಸದ ರಮೇಶ ಜಿಗಜಿಣಗಿ, ಹಣಮಂತ ನಿರಾಣಿ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಮಾಜಿ ಸಚಿವರಾದ ಎಸ್.ಕೆ. ಬೆಳ್ಳುಬ್ಬಿ, ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts