ನವದೆಹಲಿ: ಹಿಂದುಗಳ ಪವಿತ್ರ ಯಾತ್ರಾ ಸ್ಥಳ ಕೈಲಾಸ- ಮಾನಸ ಸರೋವರಕ್ಕೆ ರಸ್ತೆ ಮಾರ್ಗವನ್ನು ರಕ್ಷಣಾ ಸಚಿವ ರಾಜನಾಥ ಸಿಂಗ್ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಲೋಕಾರ್ಪಣೆ ಮಾಡಿದರು.
ಉತ್ತರಾಖಂಡದ ಧಾರಚೂಲಾ ಮತ್ತು ಭಾರತ-ಚೀನಾ ಗಡಿಯ ಲಿಪುಲೇಕ್ಗೆ ಸಂಪರ್ಕಿಸುವ 80 ಕಿ.ಮೀ. ಮಾರ್ಗ ಇದಾಗಿದ್ದು, ಇದರಿಂದ ಕೈಲಾಸ-ಮಾನಸ ಸರೋವಾರದ ಯಾತ್ರೆ 10 ಕಿ.ಮೀ. ತಗ್ಗಲಿದೆ. ಜತೆಗೆ ಇದನ್ನು ಕ್ರಮಿಸಲು ಹಿಡಿಯುತ್ತಿದ್ದ ಸಮಯ ಹಲವು ದಿನಗಳಷ್ಟು ಉಳಿತಾಯವಾಗಲಿದೆ.
ಹಳೆಯ ಮಾರ್ಗದಲ್ಲಿ ಯಾತ್ರೆಗೆ 2ರಿಂದ 3 ವಾರ ಹಿಡಿಯುತ್ತಿತ್ತು. ಈಗ ಒಂದೇ ವಾರದಲ್ಲಿ ಕೈಲಾಸ-ಮಾನಸ ಸರೋವರ ತಲುಪಬಹುದಾಗಿದೆ. ಜತೆಗೆ ಹಳೆಯ ಮಾರ್ಗದಲ್ಲಿ ಶೇ. 80 ದಾರಿ ಚೀನಾ ವ್ಯಾಪ್ತಿಯಲ್ಲಿತ್ತು. ಹೊಸ ಮಾರ್ಗದಲ್ಲಿ ಶೇ. 84ರಷ್ಟು ದಾರಿ ಭಾರತದ ಗಡಿಯೊಳಗೆ ಇದೆ.
ಇದನ್ನೂ ಓದಿ ಅಯೋಧ್ಯೆ ವಿವಾದಿತ ಕಟ್ಟಡ ಧ್ವಂಸ ಪ್ರಕರಣದ ವಿಚಾರಣೆ ಬೇಗ ಮುಗಿಸಿ: ಸುಪ್ರೀಂ ಕೋರ್ಟ್ ಆದೇಶ
ಈ ಕುರಿತು ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ರಾಜನಾಥ ಸಿಂಗ್, ‘‘ನೂತನ ಮಾರ್ಗದಿಂದ ದಶಕಗಳ ಕನಸು ನನಸಾಗಿದೆ. ಯಾತ್ರಿಗಳ ಮತ್ತು ಸ್ಥಳೀಯರ ದೊಡ್ಡ ನಿರೀಕ್ಷೆ ಪೂರ್ಣಗೊಂಡಿದೆ’’ ಎಂದಿದ್ದಾರೆ.
ನೂತನ ಮಾರ್ಗದ ಕಾಮಗಾರಿ ಕಳೆದೆರಡು ವರ್ಷದಿಂದ ವೇಗ ಪಡೆದುಕೊಂಡಿತು. ಈ ಎರಡು ವರ್ಷದಲ್ಲಿ ಸುಮಾರು 40 ಕಿ.ಮೀ.ರಸ್ತೆ ನಿರ್ಮಾಣವಾಗಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ದುರ್ಗಮವಾದ ಪ್ರದೇಶದಲ್ಲಿ ಕಾಮಗಾರಿ ನಡೆಸುವುದು ಸವಾಲಿನ ಕೆಲಸವಾಗಿತ್ತು. ಇದ್ದಕ್ಕಿದ್ದಂತೆ ಸುರಿಯುವ ಮಳೆ, ಚಳಿಗಾಲವಿಡೀ ಹಿಮಪಾತ, 6 ಸಾವಿರದಿಂದ 17 ಸಾವಿರ ಅಡಿ ಎತ್ತರದಲ್ಲಿ (ಸಮುದ್ರ ಮಟ್ಟ) ಸಾಗುವ ಅಂಕುಡೊಂಕಿನ ಬೆಟ್ಟ-ಕಣಿವೆಯ ಮಾರ್ಗ, ಸುಳಿವೇ ನೀಡದೆ ನುಗ್ಗುತ್ತಿದ್ದ ಪ್ರವಾಹ, ಅತ್ಯಂತ ಕನಿಷ್ಠ ತಾಪಮಾನದಿಂದಾಗಿ ವರ್ಷದಲ್ಲಿ ಐದು ತಿಂಗಳು ಕಾಮಗಾರಿ ಸ್ಥಗಿತವಾಗುತ್ತಿತ್ತು ಎಂದು ಗಡಿ ರಸ್ತೆ ಸಂಸ್ಥೆ (ಬಿಆರ್ಒ) ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಹರಪಾಲ್ ಸಿಂಗ್ ತಿಳಿಸಿದ್ದಾರೆ.
ರಿಯಾಜ್ ನಾಯ್ಕೂ ಹತ್ಯೆ ಬಳಿಕ ಹಿಜ್ಬುಲ್ ಮುಜಾಹಿದೀನ್ಗೆ ಬಂದ ಹೊಸ ಕಮಾಂಡರ್!