More

    ಪುಂಜಾಲಕಟ್ಟೆ- ಚಾರ್ಮಾಡಿ ಚತುಷ್ಪಥ ಕಾಮಗಾರಿ ಪರಿಶೀಲನೆ

    ಬೆಳ್ತಂಗಡಿ: ಪುಂಜಾಲಕಟ್ಟೆಯಿಂದ ಚಾರ್ಮಾಡಿ ತನಕ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯನ್ನು ಶನಿವಾರ ರಾಷ್ಟ್ರೀಯ ಹೆದ್ದಾರಿ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಆಗಮಿಸಿ ಪರಿಶೀಲನೆ ನಡೆಸಿದರು.

    ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಎರಡನೇ ಹಂತದ ಕಾಮಗಾರಿ 730 ಕೋಟಿ ರೂ.ಗಿಂತ ಅಧಿಕ ಅನುದಾನದಲ್ಲಿ ಇಲ್ಲಿನ 33.1 ಕಿ.ಮೀ. ವ್ಯಾಪ್ತಿಯಲ್ಲಿ ನಡೆಯುತ್ತಿದೆ. ಕಾಮಗಾರಿ ಅಂಗವಾಗಿ ರಸ್ತೆ ವಿಸ್ತರಣೆ, ತಡೆಗೋಡೆ ರಚನೆ, ಸೇತುವೆ, ಕಿರುಸೇತುವೆ, ಚರಂಡಿಗಳ ನಿರ್ಮಾಣ, ರಸ್ತೆ ಸಮತಟ್ಟುಗೊಳಿಸುವುದು ಸೇರಿದಂತೆ ಪ್ರಮುಖ ಕಾಮಗಾರಿಗಳು ಭರದಿಂದ ನಡೆಯುತ್ತಿವೆ.

    ಈ ವರ್ಷ ಮಳೆಗಾಲದ ಆರಂಭಕ್ಕೆ ಕಾಮಗಾರಿ ಪೂರ್ಣ ಪ್ರಮಾಣದಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ಮಳೆಗಾಲದಲ್ಲಿ ಪ್ರಾಥಮಿಕ ಹಂತದ ಕೆಲವು ಕಾಮಗಾರಿ ನಡೆದ ಬಳಿಕ ಮಳೆ ಕಡಿಮೆಯಾಗುತ್ತಿದ್ದಂತೆ ನಿರಂತರ ಕಾಮಗಾರಿ ಸಾಗಿದೆ. ಪುಂಜಾಲಕಟ್ಟೆಯಿಂದ ಉಜಿರೆ ಹಳೆಪೇಟೆ ತನಕ ರಸ್ತೆ ಅಭಿವೃದ್ಧಿಗಾಗಿ ಮರಗಳನ್ನು ತೆರವುಗೊಳಿಸಲಾಗಿದೆ. ಮಡಂತ್ಯಾರು, ಮದ್ದಡ್ಕ ಮೊದಲಾದ ಕಡೆಗಳಲ್ಲಿ ರಸ್ತೆ ವ್ಯಾಪ್ತಿಯಲ್ಲಿದ್ದ ವಿದ್ಯುತ್ ಕಂಬಗಳ ಸ್ಥಳಾಂತರ ನಡೆದಿದೆ. ಗುತ್ತಿಗೆದಾರ ಕಂಪನಿ ವತಿಯಿಂದ ನೂರಾರು ವಾಹನ, ಯಂತ್ರೋಪಕರಣ, ಕಾರ್ಮಿಕರು ಆಗಮಿಸಿದ್ದು ಕಾಮಗಾರಿ ಅಹರ್ನಿಶಿಯಾಗಿ ನಡೆಯುತ್ತಿದೆ. ರಸ್ತೆಗಳನ್ನು ಅಗೆದು ಹಾಕಿದ ಕಾರಣ ವಾಹನ ಸವಾರರಿಗೆ ಧೂಳಿನ ತೊಂದರೆ ಉಂಟಾಗಿದೆ. ಅರಣ್ಯ ಹಾಗೂ ಕಂದಾಯ ಭೂಮಿ ಇರುವ ಭಾಗಗಳಲ್ಲಿ ಕಾಮಗಾರಿ ನಡೆಯುತ್ತಿದ್ದು ಖಾಸಗಿ ಜಾಗ, ಕಟ್ಟಡಗಳನ್ನು ತೆರವಿಗೆ ಗುರುತಿಸಲಾಗಿದ್ದು, ಅಂತಿಮ ಹಂತದಲ್ಲಿದೆ. ಇದರ ಪ್ರಕ್ರಿಯೆಗಳು ಪೂರ್ಣಗೊಂಡ ಕೂಡಲೇ ಖಾಸಗಿ ಜಾಗಗಳಲ್ಲಿ ಕಾಮಗಾರಿ ಆರಂಭವಾಗಲಿದೆ. ಒಂದು ಹಂತದ ಕಾಮಗಾರಿ ಪೂರ್ಣಗೊಂಡ ಬಳಿಕ ಉಜಿರೆಯಿಂದ ಚಾರ್ಮಾಡಿ ತನಕ ಮರ ತೆರವು, ವಿದ್ಯುತ್ ಕಂಬಗಳ ಸ್ಥಳಾಂತರ ಮುಂದುವರಿಯಲಿದೆ.

    ಪರಿಶೀಲನೆ: ಶನಿವಾರ ಗುತ್ತಿಗೆದಾರ ಡಿ.ಪಿ.ಜೈನ್ ಅವರೊಂದಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಮುಖ್ಯ ಇಂಜಿನಿಯರ್ ರಮೇಂದ್ರ, ಕಾರ್ಯಪಾಲಕ ಇಂಜಿನಿಯರ್ ಶಿವಪ್ರಸಾದ್ ಅಜಿಲ ಅವರ ತಂಡ ಆಗಮಿಸಿ ಕಾಮಗಾರಿ ನಡೆಯುತ್ತಿರುವ ಹೆದ್ದಾರಿ ಉದ್ದಕ್ಕೂ ರಸ್ತೆ, ತಡೆಗೋಡೆ, ಚರಂಡಿ ಸೇತುವೆ, ಕಿರು ಸೇತುವೆ ಇತ್ಯಾದಿ ನಿರ್ಮಾಣ ಕಾಮಗಾರಿಯ ಪರಿಶೀಲನೆ ನಡೆಸಿ ಗುತ್ತಿಗೆದಾರರಿಗೆ ಸಲಹೆ-ಸೂಚನೆ ನೀಡಿ ಮಾಹಿತಿ ಪಡೆದರು.
    ಸಹಾಯಕ ಕಾರ್ಯ ಪಾಲಕ ಇಂಜಿನಿಯರ್‌ಗಳಾದ ನಾಗರಾಜ್, ಮಹಾಬಲ ನಾಯ್ಕ, ಕೀರ್ತಿ ಅಮೀನ್ ಮತ್ತಿತರರು ತಂಡದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts