ಮಳವಳ್ಳಿ: ಮಹಿಳೆಯರೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ದೇಶದ ಪ್ರಗತಿ ವೇಗ ಹೆಚ್ಚಲಿದ್ದು, ಅದಕ್ಕೆ ಪೂರಕವಾಗಿ ಕಾರ್ಯಯೋಜನೆಗಳನ್ನು ರೂಪಿಸಿಕೊಂಡು ಇನ್ನರ್ ವೀಲ್ ಸಂಸ್ಥೆ ಯಶಸ್ವಿಯಾಗಿದೆ ಎಂದು ಸಂಸ್ಥೆಯ ಜಿಲ್ಲಾಧ್ಯಕ್ಷೆ ರೇಖಾ ಶ್ರೀಧರ್ ತಿಳಿಸಿದರು.
ತಾಲೂಕಿನ ಶಿವಸಮುದ್ರಂ ಕೆಇಬಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮಂಗಳವಾರ ಇನ್ನರ್ ವೀಲ್ 319 ರ ಸಂಸ್ಥೆಯ ವತಿಯಿಂದ 22 ಟ್ಯಾಬ್ ಹಾಗೂ ಸ್ಪೋರ್ಟ್ಸ್ ಕಿಟ್ಗಳನ್ನು ವಿತರಿಸಿ ಮಾತನಾಡಿದ ಅವರು, ಗ್ರಾಮೀಣ ಮಕ್ಕಳಿಗೂ ಕಲಿಕೆಗೆ ಪೂರಕವಾದ ಆಧುನಿಕ ತಂತ್ರಜ್ಞಾನದ ಸೌಲಭ್ಯಗಳು ಹಾಗೂ ಕ್ರೀಡಾಸಕ್ತರಿಗೆ ಬೇಕಾಗುವ ಪರಿಕರಗಳು ದೊರೆತರೆ ಹಳ್ಳಿ ಮಕ್ಕಳೂ ಸಾಧಕರಾಗಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆಯೂ ಚಿಂತನೆ ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಬೆಂಬಲಿಸಬೇಕೆಂಬ ಸದುದ್ದೇಶದಿಂದ ಟ್ಯಾಬ್ ಹಾಗೂ ಸ್ಪೋರ್ಟ್ಸ್ ಕಿಟ್ಗಳನ್ನು ವಿತರಿಸಲಾಗಿದ್ದು, ಇವುಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ದೇಶದ ಉತ್ತಮ ಸಾಧಕ ಪ್ರಜೆಗಳಾಗುವಂತೆ ಕರೆ ನೀಡಿದರು.
ಶಿವಸಮುದ್ರಂನ ಕೆಪಿಸಿಎಲ್ ಯೋಜನಾ ಮುಖ್ಯಸ್ಥ ಎನ್.ನವೀನ್ಕುಮಾರ್ ಅಧ್ಯಕ್ಷತೆ ಮಹಿಸಿ ಮಾತನಾಡಿ, ಹಳ್ಳಿಗಾಡಿನ ಮಕ್ಕಳಿಗೆ ಶಿಕ್ಷಣವೆಂಬುದು ಮರೀಚಿಕೆ ಎಂಬ ಕಾಲವಿತ್ತು. ಆದರೆ ಪಸ್ತುತ ಶೈಕ್ಷಣಿಕವಾಗಿ ಯಶಸ್ಸು ಸಾಧಿಸುವವರಲ್ಲಿ ಗ್ರಾಮೀಣ ಮಕ್ಕಳ ಸಂಖ್ಯೆ ಹೆಚ್ಚಿನದಾಗಿದೆ. ಆಧುನಿಕ ಜಗತ್ತಿನ ತಂತ್ರಜ್ಞಾನದ ವೇಗಕ್ಕೆ ಎಲ್ಲರೂ ಹೊಂದಿಕೊಂಡು ಶಿಕ್ಷಣವಂತರಾಗಬೇಕೆಂದು ಕಿವಿಮಾತು ಹೇಳಿದರು.
ಕೆಪಿಸಿಎಲ್ ಎಇ ರಮೇಶ್, ಅಧಿಕಾರಿಗಳಾದ ಮಾದಪ್ಪ, ಎನ್.ಮಹೇಶ್, ಮುಖ್ಯ ಶಿಕ್ಷಕ ಎಚ್.ಸಿ.ನಾಗರಾಜು, ಸಹ ಶಿಕ್ಷಕ ಕೃಷ್ಣಗೌಡ, ಇನ್ನರ್ ವೀಲ್ ಸಂಸ್ಥೆ ಪದಾಧಿಕಾರಿಗಳು ಹಾಜರಿದ್ದರು.