ಉಡುಪಿ: ವಿಶ್ವದ ಅತಿಶ್ರೇಷ್ಠ ವರ್ಣ ಚಿತ್ರಕಾರ, ಶಿಲ್ಪಿ, ಅಂಗ ರಚನೆಕಾರ ಹಾಗೂ ಸಂಗೀತಗಾರನೂ ಆದ ಲಿಯಾನಾಡೋರ್ ಡಾ. ವಿನ್ಸಿ ಜನ್ಮದಿನದ ಸ್ಮರಣಾರ್ಥ ವಿಶ್ವಕಲಾ ದಿನ ಆಚರಿಸಲಾಗುತ್ತಿದ್ದು, ತನ್ನಿಮಿತ್ತ ಮಣಿಪಾಲದ ತ್ರಿವರ್ಣ ಆರ್ಟ್ ಗ್ಯಾಲರಿ ವತಿಯಿಂದ ಏ.15 ಮತ್ತು 16ರಂದು “ಇನ್ನರ್ ಸೆನ್ಸ್’ ಎಂಬ ಪ್ರತಿಷ್ಠಾಪನಾ ಕಲಾ ಪ್ರದರ್ಶನ ಆಯೋಜಿಸಲಾಗಿದೆ ಎಂದು ಕೇಂದ್ರದ ಮಾರ್ಗದರ್ಶಕ ಹರೀಶ್ ಸಾಗಾ ಮಾಹಿತಿ ನೀಡಿದರು.
ಉಡುಪಿಯ ಪ್ರೆಸ್ಕ್ಲಬ್ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಲೆ ಮತ್ತು ಬದುಕಿನ ವಿವಿಧ ಆಯಾಮಗಳಲ್ಲಿ ಕಲೆಯ ಅನುಬಂಧದತೆಯನ್ನು ಸಾರುವ ಕಲಾ ಸಂಭ್ರಮ ಇದಾಗಿದೆ ಎಂದರು.
- 14ರಂದು ಉದ್ಘಾಟನೆ:
ಮಣಿಪಾಲದ ಟೈಗರ್ ಸರ್ಕಲ್ ಸಮೀಪದ ಅನ್ನಪೂರ್ಣಾ ಕಾಂಪ್ಲೆಕ್ಸ್ನಲ್ಲಿರುವ ತ್ರಿವರ್ಣ ಆರ್ಟ್ ಗ್ಯಾಲರಿಯಲ್ಲಿ ಏ.14ರಂದು ಸಂಜೆ 4:30ಕ್ಕೆ ಉಡುಪಿಯ ಹಿರಿಯ ಕಲಾವಿದ ಮತ್ತು ಆರ್ಟಿಸ್ಟ್ ೋರಂನ ಅಧ್ಯಕ್ಷ ರಮೇಶ್ ರಾವ್ ಉದ್ಘಾಟಿಸಲಿದ್ದಾರೆ. ಉಡುಪಿಯ ಯ್ಯಾಂ ಕೇರ್ ಕ್ಲಿನಿಕ್ನ ರೊ. ಡಾ. ಕೆ. ಸುರೇಶ್ ಶೆಣೈ ಪಾಲ್ಗೊಳ್ಳಲಿದ್ದಾರೆ. ಏ.15 ಮತ್ತು 16ರಂದು ಬೆಳಗ್ಗೆ 9:30ರಿಂದ ಸಂಜೆ 7:30ರ ತನಕ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರದ ವಿದ್ಯಾರ್ಥಿಗಳಾದ ಅನಿರುದ್ಧ ನಾಯ್ಕ್, ಅನುಷಾ ಆಚಾರ್ಯ, ಪ್ರಸಾದ್ ಆರ್., ಉಜ್ವಲ್ ನಿಟ್ಟೆ, ಯಶ್ಮಿತಾ ಗಣೇಶ್ ಇದ್ದರು.
ಕಲೆಯ ಪ್ರಕಾರ ಅರ್ಥೈಸುವ ಉದ್ದೇಶ
ಕಲೆಯ ವಿವಿಧ ಮಜಲುಗಳಾದ ಚಿತ್ರ, ಶಿಲ್ಪ, ವಾಸ್ತುಶಿಲ್ಪ, ಸಂಗೀತ, ಸಾಹಿತ್ಯ, ನಾಟ್ಯ, ನಾಟಕದಂತಹ ಲಲಿತ ಕಲೆಯನ್ನು ಕೇಂದ್ರವಾಗಿಸಿಕೊಂಡು ಪ್ರದರ್ಶನ ನಡೆಯಲಿದೆ. ಕೇಂದ್ರದ ವಿದ್ಯಾರ್ಥಿಗಳೇ ಕಾಗದ, ರಟ್ಟು, ಅಂಟು, ಮಣ್ಣು, ಮರಳು, ಹಗ್ಗ, ಬುಟ್ಟಿ, ಬಟ್ಟೆ, ರಂಗೋಲಿ ಪೌಡರ್, ಸರಿಗೆಯಂತಹ ಕಚ್ಚಾ ವಸ್ತು ಬಳಸಿ ತಯಾರಿಸಿದ ಕಲೆಯನ್ನು ನೆರಳು&ಬೆಳಕಿನ ಸಂಯೋಜನೆಯಡಿ ಪ್ರದರ್ಶಿಸುವ ವಿಶಿಷ್ಟ ಕಲೆ ಇದಾಗಿದೆ. ಜನರಿಗೆ ಕಲೆಯ ಪ್ರೇರಣೆ ಮತ್ತು ರೂಪಾಂತರಗೊಂಡ ಕಲೆಯ ಪ್ರಕಾರ ಅರ್ಥೈಸುವುದೇ ಈ ಕಲಾ ಪ್ರದರ್ಶನದ ಉದ್ದೇಶವಾಗಿದೆ.