More

    ಧನ್ವಂತರಿ: ವೈರಸ್ ನಿರೋಧಿಸುವ ಸೊಗದೆಬೇರು

    ಧನ್ವಂತರಿ: ವೈರಸ್ ನಿರೋಧಿಸುವ ಸೊಗದೆಬೇರು

    ಈ ಬೇಸಿಗೆಯಲ್ಲಿ ದೇಹಕ್ಕೆ, ಮನಸ್ಸಿಗೆ ತಂಪು ನೀಡುವ, ವೈರಸ್​ಗಳನ್ನು ನಿರೋಧಿಸುವ ಗುಣವಿರುವ ವಿಶೇಷ ಗಿಡದ ಬಗ್ಗೆ ಇಂದು ತಿಳಿದುಕೊಳ್ಳೋಣ. ಇದನ್ನು ಚಿಕ್ಕಮಕ್ಕಳಿಂದ ಹಿಡಿದು ವೃದ್ಧರವರೆಗೆ, ಗರ್ಭಿಣಿಯರಿಂದ ಹಿಡಿದು ಮಗುವಿಗೆ ಹಾಲೂಡಿಸುವ ತಾಯಂದಿರ ತನಕ ಎಲ್ಲರೂ ಬಳಸಬಹುದು. ಅದೇ ಸೊಗದೆಬೇರು ಅಥವಾ ನನ್ನಾರಿ. ಇದರ ಬಳ್ಳಿಗೆ ಹಾಲು ಬರುವ ಕಾರಣ ಹಾಲುಬಳ್ಳಿ ಬೇರು ಎಂದೂ ಕರೆಯುತ್ತಾರೆ. ಪೂರ್ತಿ ಕಿತ್ತು ತೆಗೆಯಲಾಗದಷ್ಟು ಆಳಕ್ಕೆ ಬೇರು ಬಿಡುವ ಕಾರಣ ‘ಅನಂತಮೂಲ’ ಎಂದೂ ಕರೆಯುತ್ತಾರೆ.

    ನಮ್ಮ ದೇಹಕ್ಕೆ ತೊಂದರೆ ಕೊಡುವ ಹಲವಾರು ವೈರಸ್​ಗಳ ವಿರುದ್ಧ ಹೋರಾಡಲು ಇದು ಚೈತನ್ಯ ಕೊಡುತ್ತದೆ ಎಂಬುದು ಸಾಬೀತಾಗಿದೆ. ವಿಶೇಷವಾಗಿ ಸರ್ಪಸುತ್ತಿಗೆ ಕಾರಣವಾಗುವ ವೈರಸ್ ನಿರೋಧಿಸುವ ಗುಣ ಇದಕ್ಕಿದೆ. ಏಡ್ಸ್ ವೈರಸ್ ವಿರುದ್ಧ ಕೆಲಸ ಮಾಡುವ ತಾಕತ್ತು ಕೂಡ ಇದಕ್ಕಿದೆ. ಅಮೃತಬಳ್ಳಿ, ಶುಂಠಿ, ನೆಲನೆಲ್ಲಿ, ಅರಿಶಿಣ, ಜ್ಯೇಷ್ಠಮಧು ಇವುಗಳನ್ನು ತಲಾ ಎರಡು ಗ್ರಾಂ ಹಾಕಿ ನಾಲ್ಕು ಲೋಟ ನೀರಿನಲ್ಲಿ ಕುದಿಸಿ ಒಂದು ಲೋಟಕ್ಕೆ ಇಳಿಯುತ್ತಿದ್ದಂತೆ ಅದಕ್ಕೆ ಮೂರು ಗ್ರಾಂ ಸೊಗದೆಬೇರು ಅಥವಾ ಅದರ ಪುಡಿಯನ್ನು ಹಾಕಿ ಬೆಂಕಿ ಆರಿಸಿ ಮುಚ್ಚಿಡಬೇಕು. ಈ ಕಷಾಯ ತಣಿದ ನಂತರ ಕುಡಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಜತೆಗೆ ಸೊಗದೆಬೇರಿರುವ ಕಾರಣದಿಂದ ಉಷ್ಣತೆಯಾಗುವುದಿಲ್ಲ. ದೇಹದಲ್ಲಿ ಉಷ್ಣತೆಯ ಕಾರಣದಿಂದ ಪದೇಪದೆ ಚರ್ಮರೋಗ, ಮೊಡವೆ, ದೇಹ ಕಪ್ಪಾಗುವುದು, ಉರಿಮೂತ್ರ, ಹಸ್ತ ಪಾದಗಳು ಉರಿಯಾಗುವುದು, ಮುಟ್ಟಿನ ಸಮಯದಲ್ಲಿ ಅತಿಯಾಗಿ ರಕ್ತಸ್ರಾವವಾಗುವುದು, ಬಿಳಿ ಮುಟ್ಟಿನ ಸಮಸ್ಯೆಯಾಗುವುದು ಇಂತಹ ತೊಂದರೆಗಳಾಗುತ್ತಿದ್ದರೆ ಈ ಬೇರನ್ನು ಬಳಸಬೇಕು. ಇದರಿಂದ ದೇಹದ ಕಾಂತಿ ಕೂಡ ಹೆಚ್ಚುತದೆ. ಮನಸ್ಸು ಶಾಂತವಾಗುತ್ತದೆ. ವೀರ್ಯವೃದ್ಧಿಯಾಗುತ್ತದೆ. ಬಾಯಿ ರುಚಿ ಕಡಿಮೆಯಾಗಿದ್ದರೆ, ಒಣಕೆಮ್ಮು, ವಿಷದೋಷ, ಪದೇಪದೆ ಜ್ವರ, ಭೇದಿಗಳಿದ್ದರೂ ಕಡಿಮೆಯಾಗುತ್ತದೆ. ತಂಪು ಗುಣ ಹೊಂದಿದ್ದರೂ ಅಗ್ನಿವೃದ್ಧಿ ಮಾಡಿ ಅಜೀರ್ಣವನ್ನು ಕಡಿಮೆ ಮಾಡುತ್ತದೆ. ರಕ್ತಶುದ್ಧಿ ಮಾಡುವ ಗುಣವಿರುವ ಕಾರಣ ಚರ್ಮರೋಗಗಳಲ್ಲಿ, ವಿಶೇಷವಾಗಿ ಪಿತ್ತದಿಂದ ಆದ ಚರ್ಮರೋಗದಲ್ಲಿ ಅತ್ಯಂತ ಉಪಯುಕ್ತವಾದದ್ದು. ಮೂತ್ರಮಾರ್ಗದ ಸಮಸ್ಯೆಗಳಲ್ಲಂತೂ ಇದು ಅತ್ಯಂತ ವಿಶೇಷ ಗುಣಕಾರಿ. ಕಿಡ್ನಿಯ ಬಾವಿನಿಂದ ಮೂತ್ರ ಸರಿಯಾಗಿ ಆಗದಿದ್ದಾಗ ಇದನ್ನು ಬಳಸಬೇಕು ಎಂದು ಹಲವಾರು ಆಧುನಿಕ ಸಂಶೋಧನೆಗಳೇ ಹೇಳಿವೆ. ಮೂತ್ರದಲ್ಲಿ ಉರಿ, ಉಷ್ಣದ ಕಾರಣದಿಂದ ಸರಾಗವಾಗಿ ಮೂತ್ರವಾಗದಿದ್ದರೆ, ಮೂತ್ರ ಮಾಡುವ ಜಾಗದಲ್ಲಿ ಹುಣ್ಣುಗಳಾಗುತ್ತಿದ್ದರೆ ಇದರ ಬಳಕೆ ಅತ್ಯಂತ ಲಾಭದಾಯಕ. ಎಷ್ಟೋ ಜನರಿಗೆ ಹಸ್ತ-ಪಾದಗಳಲ್ಲಿ ಅತಿಯಾಗಿ ಬೆವರುವ ಕಾರಣ ತುಂಬ ಹಿಂಸೆಯಾಗುತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ಶ್ರೀಗಂಧದ ಚೂರುಗಳ ಕಷಾಯಕ್ಕೆ ಸೊಗದೆಬೇರನ್ನು ಹಾಕಿ ಕುಡಿಯುವುದು ಸಹಾಯಕ. ಇದರ ಬೇರನ್ನು ಹಾಲಿನಲ್ಲಿ ತೇಯ್ದು ಅಥವಾ ಪುಡಿಯನ್ನು ಹಾಲಿನಲ್ಲಿ ಹಾಕಿ ಕುಡಿಯಬಹುದು. ಪ್ರತಿದಿನ ಅರ್ಧ ಚಮಚದಷ್ಟು ಬಳಕೆ ಮಾಡಬಹುದು. ನಿತ್ಯ ಕಷಾಯ ಕುಡಿಯುವ ರೂಢಿಯಿದ್ದರೆ ಕಷಾಯಪುಡಿಗೆ ಇದನ್ನು ಸೇರಿಸಿಟ್ಟುಕೊಳ್ಳಬಹುದು. ಆದರೆ ತುಂಬ ಕುದಿಸುವುದು ಸರಿಯಲ್ಲ. ಕಷಾಯ ತಯಾರಾಗುತ್ತಿದ್ದಂತೆ ಇದನ್ನು ಹಾಕಿ ಬೆಂಕಿ ಆರಿಸುವುದು ಸೂಕ್ತ. ಹಾಲಿನಲ್ಲಿ ಇದರ ಪುಡಿ ಕಲಸಿ ಮುಖಕ್ಕೆ ಹಚ್ಚಿದರೆ ಕಪ್ಪುಕಲೆ ಹೋಗಿ ಮುಖದ ಕಾಂತಿ ಹೆಚ್ಚುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts