ರಾಜ್ಕೋಟ್: ಚುಟುಕು ಕ್ರಿಕೆಟ್ ಸರಣಿ ಉಳಿವಿನ ದೃಷ್ಟಿಯಿಂದ ನಿರ್ಣಾಯಕವಾಗಿದ್ದ ಹೋರಾಟದಲ್ಲಿ ಭಾರತ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡವನ್ನು 82 ರನ್ಗಳಿಂದ ಏಕಪಕ್ಷೀಯವಾಗಿ ಮಣಿಸಿತು. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 2-2ರಿಂದ ಸಮಬಲ ಸಾಧಿಸಿದ ರಿಷಭ್ ಪಂತ್ ಪಡೆ, ತವರು ನೆಲದಲ್ಲಿ ಸರಣಿ ಗೆಲುವಿನ ಆಸೆಯನ್ನು ಚಿಗುರಿಸಿಕೊಂಡಿತು. ಆರಂಭಿಕ ಎರಡೂ ಪಂದ್ಯಗಳಲ್ಲಿ ಸೋತು ನಿರಾಸೆ ಅನುಭವಿಸಿದ್ದ ಭಾರತ ತಂಡ, ಇದೀಗ ಪ್ರವಾಸಿ ತಂಡಕ್ಕೆ ತಿರುಗೇಟು ನೀಡಿದ್ದು, ಭಾನುವಾರ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಸರಣಿಗೆ ಕ್ಲೈಮ್ಯಾಕ್ಸ್ ಸಿಗಲಿದೆ.
ಸೌರಾಷ್ಟ್ರ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ 4ನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ, ದಿನೇಶ್ ಕಾರ್ತಿಕ್ (55 ರನ್, 27 ಎಸೆತ, 9 ಬೌಂಡರಿ, 2 ಸಿಕ್ಸರ್) ಹಾಗೂ ಹಾರ್ದಿಕ್ ಪಾಂಡ್ಯ (46ರನ್, 31 ಎಸೆತ, 3 ಬೌಂಡರಿ, 3 ಸಿಕ್ಸರ್) ಜೋಡಿಯ ಬಿರುಸಿನ ಬ್ಯಾಟಿಂಗ್ ಫಲವಾಗಿ 6 ವಿಕೆಟ್ಗೆ 169 ರನ್ ಪೇರಿಸಿತು. ಬಳಿಕ ಯುವ ವೇಗಿ ಆವೇಶ್ ಖಾನ್ (18ಕ್ಕೆ 4) ಹಾಗೂ ಸ್ಪಿನ್ನರ್ ಯಜುವೇಂದ್ರ ಚಾಹಲ್ (21ಕ್ಕೆ 2) ಮಾರಕ ದಾಳಿಗೆ ನಲುಗಿ 16.5 ಓವರ್ಗಳಲ್ಲಿ 87 ರನ್ಗಳಿಗೆ ಸರ್ವಪತನ ಕಂಡಿತು.
ಭಾರತ: 6 ವಿಕೆಟ್ಗೆ 169 (ಇಶಾನ್ ಕಿಶನ್ 27, ಹಾರ್ದಿಕ್ ಪಾಂಡ್ಯ 46, ದಿನೇಶ್ ಕಾರ್ತಿಕ್ 55, ಲುಂಗಿ ಎನ್ಗಿಡಿ 20ಕ್ಕೆ 2, ಮಾರ್ಕೋ ಜಾನ್ಸೆನ್ 38ಕ್ಕೆ 1, ಅನ್ರಿಚ್ ನೋಕಿಯ 21ಕ್ಕೆ 1, ಕೇಶವ್ ಮಹಾರಾಜ್ 29ಕ್ಕೆ 1), ದಕ್ಷಿಣ ಆಫ್ರಿಕಾ: 16.5 ಓವರ್ಗಳಲ್ಲಿ 87 (ರಸೀ ವ್ಯಾನ್ ಡರ್ ಡುಸೆನ್ 20, ಮಾರ್ಕೋ ಜಾನ್ಸೆನ್ 12, ಕ್ವಿಂಟನ್ ಡಿಕಾಕ್ 14, ಆವೇಶ್ ಖಾನ್ 18ಕ್ಕೆ 4, ಯಜುವೇಂದ್ರ ಚಾಹಲ್ 21ಕ್ಕೆ 2, ಅಕ್ಷರ್ ಪಟೇಲ್ 19ಕ್ಕೆ 1).
.@DineshKarthik put on an impressive show with the bat & bagged the Player of the Match award as #TeamIndia beat South Africa in Rajkot. 👏 👏
Scorecard ▶️ https://t.co/9Mx4DQmACq #INDvSA | @Paytm pic.twitter.com/RwIBD2OP3p
— BCCI (@BCCI) June 17, 2022