ನವದೆಹಲಿ: ರಾಜಧಾನಿ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶದಲ್ಲಿ ಆಮ್ ಆದ್ಮಿ ಪಕ್ಷ ಒಟ್ಟು 70 ಸ್ಥಾನಗಳಲ್ಲಿ 63ರಲ್ಲಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದು, ಅಧಿಕೃತ ಬಾಕಿಯೊಂದೆ ಬಾಕಿ ಇದೆ. 7 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡು ಈ ಬಾರಿಯು ಬಿಜೆಪಿ ಅಧಿಕಾರದ ಗದ್ದುಗೆಯಿಂದ ಜಾರಿಕೊಳ್ಳುತ್ತಿದೆ. ಇದರ ನಡುವೆಯೇ ದೆಹಲಿ ಬಿಜೆಪಿ ಕಚೇರಿಯಲ್ಲಿ ಅವಳವಡಿಸಲಾಗಿರುವ ನಾಮಫಲಕವೊಂದು ಭಾರಿ ಸುದ್ದಿಯಾಗಿದೆ.
ಗೃಹ ಸಚಿವ ಅಮಿತ್ ಷಾ ಫೋಟೋವನ್ನೊಳಗೊಂಡಂತೆ ದ್ವಂದ್ವಾರ್ಥ ಹೊಂದಿರುವ ಪೋಸ್ಟರ್ ಸಂದೇಶ ಭಾರಿ ಕುತೂಹಲ ಮೂಡಿಸಿದೆ. ಪೋಸ್ಟರ್ನಲ್ಲಿರುವಂತೆ “ವಿಜಯೋತ್ಸವ ನಮ್ಮನ್ನು ಅಹಂಕಾರಿಗಳನ್ನಾಗಿ ಮಾಡುವುದಿಲ್ಲ ಮತ್ತು ಸೋಲು ನಮ್ಮನ್ನು ಹತಾಶೆಗೊಳಿಸುವುದಿಲ್ಲ” ಎಂದು ಬರೆಯಲಾಗಿದೆ. ಅಂದಹಾಗೆ ಅಮಿತ್ ಷಾ ಅವರು ದೆಹಲಿ ಚುನಾವಣಾ ಪ್ರಚಾರದ ನೇತೃತ್ವವನ್ನು ವಹಿಸಿದ್ದರು.
ದೆಹಲಿಯಲ್ಲಿ ಆಪ್ ಗದ್ದುಗೆ ಏರಲಿದೆ ಎಂದು ಎಕ್ಸಿಟ್ ಪೋಲ್ ಕೂಡ ಭವಿಷ್ಯ ನುಡಿದಿತ್ತು. ಅದರಂತೆ ಆಪ್ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದು, ಮೂರನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಸಮೀಪದತ್ತ ಬಂದಿದೆ. ಒಟ್ಟು 70 ಸ್ಥಾನಗಳಲ್ಲಿ 63ರಲ್ಲಿ ಆಪ್ ಹಾಗೂ 7 ರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದರೆ, ಕಾಂಗ್ರೆಸ್ ಶೂನ್ಯ ಸಂಪಾದಿಸಿದ್ದು, ಅಧಿಕೃತ ಬಾಕಿಯೊಂದೆ ಉಳಿದಿದೆ. (ಏಜೆನ್ಸೀಸ್)