ಹಗರಿಬೊಮ್ಮನಹಳ್ಳಿ: ತಾಲೂಕಿನ ಮೋರಿಗೇರಿ ಗ್ರಾಮದಲ್ಲಿ ರೈತ ಮಹಿಳೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮದ ದಿದ್ಗಿ ಮೈಲವ್ವ (50) ಮೃತ ದುರ್ದೈವಿ. ಗ್ರಾಮದಲ್ಲಿ ಸರ್ಕಾರದ 5 ಎಕರೆ ಜಮೀನಿನಲ್ಲಿ 30 ವರ್ಷಗಳಿಂದ ಉಳುಮೆ ಮಾಡುತ್ತಿದ್ದ ಮೈಲವ್ವಗೆ ಗ್ರಾಪಂ ಪಿಡಿಒ ಸೇರಿದಂತೆ ಸಿಬ್ಬಂದಿ ಜಮೀನು ತೆರವುಗೊಳಿಸುವಂತೆ ಒಕ್ಕಲೆಬ್ಬಿಸಿದ್ದಾರೆ ಎನ್ನಲಾಗಿದೆ. ಬಳಿಕ ಆ ಜಮೀನಿನಲ್ಲಿ ನರೇಗಾ ಯೋಜನೆ ಕಾಮಗಾರಿ ಕೈಗೊಂಡಿದ್ದು, ಇದನ್ನು ಕಂಡು ಮಹಿಳೆ ವಿಷ ಕುಡಿದಿದ್ದಾರೆ.
ಕೂಡಲೇ ಹಂಪಸಾಗರ ಪಿಎಚ್ಸಿ ಸೇರಿ ತಾಲೂಕು ಆಸತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ. ಪಿಡಿಒ, ಗ್ರಾಪಂ ಅಧ್ಯಕ್ಷ, ಸಿಬ್ಬಂದಿ ವಿರುದ್ಧ ಕುಟುಂಬದವರು ನೀಡಿದ ದೂರಿನ ಮೇರೆಗೆ ಇಟ್ಟಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಹಸೀಲ್ದಾರ್ಗೆ ಮನವಿ: ಮೃತದೇಹವನ್ನು ಗ್ರಾಪಂ ಕಚೇರಿ ಮುಂದಿಟ್ಟು ಪ್ರತಿಭಟನೆಗೆ ದಲಿತ ಸೇನೆ ತಾಲೂಕು ಸಮಿತಿ ಮತ್ತು ಕುಟುಂಬಸ್ಥರು ಮುಂದಾಗಿದ್ದರು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್, ಡಿವೈಎಸ್ಪಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಮನವೊಲಿಸಿದರು.
ಮುಖಂಡರು ಮಾತನಾಡಿ, ಮೃತಳ ಕುಟುಂಬದವರಿಗೆ 5 ಎಕರೆ ಭೂಮಿ, ಪುತ್ರನಿಗೆ ಸರ್ಕಾರಿ ಉದ್ಯೋಗ, 50 ಲಕ್ಷ ರೂ. ಪರಿಹಾರ ಹಾಗೂ ದಲಿತ ಕುಟುಂಬದವರಿಗೆ ರುದ್ರಭೂಮಿ ನೀಡುವಂತೆ ತಹಸೀಲ್ದಾರ್ ಚಂದ್ರಶೇಖರ್ ಶಂಬಣ್ಣ ಗಾಳಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಮಂಜುನಾಥ, ತಾಪಂ ಇಒ ಜಿ.ಪರಮೇಶ್ವರ, ನರೇಗಾ ಯೋಜನೆ ಎಡಿ ರಮೇಶ್ ಮಹಾಲಿಂಗಪುರ, ಸಮಾಜ ಕಲ್ಯಾಣ ಇಲಾಖೆ ಎಡಿ ಆಂಜನೇಯ ಹುಲ್ಲಾಳ್, ಹರಪನಹಳ್ಳಿ ಡಿವೈಎಸ್ಪಿ ವೆಂಕಟಪ್ಪ ನಾಯಕ, ಹೂವಿನಹಡಗಲಿ ಸಿಪಿಐ ಬೋಸರಾಜು, ಹಬೊಹಳ್ಳಿ ಸಿಪಿಐ ವಿಕಾಸ್ ಲಮಾಣಿ ಇದ್ದರು. ಪೊಲೀಸ್ ಬಂದೋಬಸ್ತ್ ನೀಡಲಾಗಿತ್ತು.