ನವದೆಹಲಿ: ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಭಾರತ ಹುನ್ನಾರ ನಡೆಸಿದ ಎಂದು ತಾವು ಮಾಡಿರುವ ಆರೋಪಕ್ಕೆ ಸಾಕ್ಷ್ಯ ಒದಗಿಸಿ, ಇಲ್ಲವೇ ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಿರಿ ಎಂದು ನೇಪಾಳ ಕಮ್ಯುನಿಸ್ಟ್ ಪಕ್ಷ ಕೆ.ಪಿ. ಶರ್ಮ ಓಲಿ ಅವರಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ. ಇದರ ಬೆನ್ನಲ್ಲೇ ಅವರ ಬೆಂಬಲಕ್ಕೆ ನಿಲ್ಲಲು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಒಂದಾಗಿದ್ದಾರೆ.
ಶನಿವಾರ ನಡೆದ ನೇಪಾಳ ಕಮ್ಯುನಿಸ್ಟ್ ಪಕ್ಷದ ಸಭೆಯಲ್ಲಿ ತಮ್ಮನ್ನು ಪದಚ್ಯುತಗೊಳಿಸಲು ಭಾರತ ಹುನ್ನಾರ ನಡೆಸಿದೆ. ಲಿಂಪಿಯಾಧುರಾ, ಲಿಪುಲೇಖ್ ಮತ್ತು ಕಾಲಾಪಾನಿ ಪ್ರದೇಶಗಳನ್ನು ಒಳಗೊಂಡಂತೆ ಪರಿಷ್ಕೃತ ನಕ್ಷೆ ರೂಪಿಸಿದ್ದಕ್ಕಾಗಿ ತಮ್ಮನ್ನು ಪದಚ್ಯುತಗೊಳಿಸಲು ಪಕ್ಷದ ಮುಖಂಡರು ಭಾರತದೊಂದಿಗೆ ಕೈಜೋಡಿಸಿದ್ದಾರೆ ಎಂದು ನೇಪಾಳ ಪ್ರಧಾನಿ ಕೆ.ಪಿ. ಶರ್ಮ ಓಲಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ತಮ್ಮ ಆರೋಪಗಳಿಗೆ ಸೂಕ್ತ ಸಾಕ್ಷಾಧಾರ ಒದಗಿಸಬೇಕು. ಇಲ್ಲವೇ ಹುದ್ದೆಯಿಂದ ಕೆಳಗಿಳಿಯಬೇಕು ಎಂದು ಪಕ್ಷದ ಮುಖಂಡರು ಓಲಿಗೆ ತಾಕೀತು ಮಾಡಿದ್ದರು.
ಇದನ್ನೂ ಓದಿ: ಕೋವಿಡ್ನಿಂದ ಯಾವುದೇ ರಾಷ್ಟ್ರವೂ ಸುರಕ್ಷಿತವಾಗಿಲ್ಲ, ನಿಮ್ಮ ಹುಷಾರಿನಲ್ಲಿ ನೀವಿರಿ
ಇಂಥ ಇಕ್ಕಟ್ಟಿನ ಸಂದರ್ಭದಲ್ಲೇ ನೇಪಾಳದ ಪ್ರಧಾನಿಯೊಂದಿಗೆ ಮಾತನಾಡುವುದಿದೆ. ದೂರವಾಣಿ ಮೂಲಕ ಮಾತನಾಡಲು ಬಯಸಿದ್ದೇನೆ. ಇದಕ್ಕಾಗಿ ಸೂಕ್ತ ಸಮಯವನ್ನು ನಿಗದಿಗೊಳಿಸಿ ಎಂದು ನೇಪಾಳದ ವಿದೇಶಾಂಗ ಸಚಿವಾಲಯಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಂದೇಶ ರವಾನಿಸಿದ್ದಾರೆ. ಸಾಧ್ಯವಾದಷ್ಟು ಗುರುವಾರ ಮಧ್ಯಾಹ್ನ 12.30ಕ್ಕೆ (ನೇಪಾಳದ ಸಮಯ) ಸಮಯ ನಿಗದಿಪಡಿಸುವಂತೆಯೂ ಸ್ವತಃ ಅವರೇ ಸೂಚಿಸಿದ್ದಾರೆ.
ಕರಾಚಿಯ ಷೇರು ವಿನಿಮಿಯ ಕೇಂದ್ರದ ಮೇಲೆ ಉಗ್ರರ ದಾಳಿಗೆ ಭಾರತವೇ ಕಾರಣ ಎಂದು ಆರೋಪಿಸಿದ ಬೆನ್ನಲ್ಲೇ ಇಮ್ರಾನ್ ಖಾನ್ ನೇಪಾಳ ಪ್ರಧಾನಿಗೆ ಇಂಥ ಸಂದೇಶ ರವಾನಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಲಡಾಖ್ನಲ್ಲಿ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ನೇಪಾಳ ಮತ್ತು ಪಾಕಿಸ್ತಾನದ ಪ್ರಧಾನಿಗಳ ದೂರವಾಣಿ ಮಾತುಕತೆ ನಡೆಯುತ್ತಿರುವುದು ಕಾಕತಾಳೀಯ ಎನ್ನಲಾಗುತ್ತಿದೆ.