ಚಿಕ್ಕಮಗಳೂರು: ಮಕ್ಕಳಿಗೆ ಬಾಲ್ಯದಿಂದಲೇ ಶಿವಾಜಿ ಮಹಾರಾಜರ ಜೀವನ ಚರಿತ್ರೆ ತಿಳಿಸುವ ಮೂಲಕ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಪಾಲಕರು ಪ್ರೇರೇಪಿಸಬೇಕು ಎಂದು ವಂದೇ ಮಾತರಂ ಟ್ರಸ್ಟ್ ಅಧ್ಯಕ್ಷ ಪ್ರೀತೇಶ್ ತಿಳಿಸಿದರು.
ನಗರದ ಬಸವನಹಳ್ಳಿ ಸಮೀಪ ಶಂಕರ ಮಠದಲ್ಲಿ ಶಿವಾಜಿ ಮಹಾರಾಜರ 394ನೇ ಜನ್ಮದಿನಾಚರಣೆ ಅಂಗವಾಗಿ ಪುಟಾಣಿ ಮಕ್ಕಳಿಗೆ ಹಿಂದುತ್ವ ಎಂಬ ಆಟಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತೀಯ ಸಂಸ್ಕೃತಿಗಾಗಿ ಹೋರಾಡಿದವರನ್ನು ಇಂದಿನ ಯುವ ಪೀಳಿಗೆ ಸ್ಮರಿಸಬೇಕು ಎಂದು ತಿಳಿಸಿದರು.
ಶಿವಾಜಿ ಬದುಕಿನ ಚರಿತ್ರೆ ಹಾಗೂ ಆದರ್ಶಗಳನ್ನು ಅನುಸರಿಸುವ ಮಕ್ಕಳು ಮಾತೃ ಭೂಮಿ ಭಕ್ತರಾಗುತ್ತಾರೆ. ಶಿವಾಜಿಯಂತೆ ಧರ್ಮ ರಕ್ಷಣೆ ಮಾಡುವ ಗುಣವನ್ನು ಚಿಕ್ಕ ವಯಸ್ಸಿನಲ್ಲೇ ಬೆಳೆಸಿಕೊಳ್ಳಬೇಕು. ಹಿರಿಯರಿಗೆ ಗೌರವ ಕೊಡುವುದು, ಸಂಸ್ಕೃತಿ ಪಾಲಿಸುವುದು ಮಾಡಿದರೆ ಮಾತ್ರ ಶಿವಾಜಿ ಮಹಾರಾಜರಿಗೆ ದೊಡ್ಡ ಗೌರವ ನೀಡಿದಂತಾಗುತ್ತದೆ ಎಂದರು.
ಶಿವಾಜಿ ಭಾರತ ಚರಿತ್ರೆಯನ್ನು ಬದಲಾಯಿಸಿದ ಯುಗ ಪುರುಷ ಹಾಗೂ ಪ್ರೇರಣಾ ಶಕ್ತಿ. ದೇಶವನ್ನು ಗುಲಾಮಗಿರಿಗೆ ಒಡ್ಡುವ ಸಂದರ್ಭದಲ್ಲಿ ತಡೆ ನೀಡಿ ನಮ್ಮ ಸಂಸ್ಕೃತಿ, ಪರಂಪರೆ ಉಳಿಸಿ, ಮರುಸ್ಥಾಪಿಸಿದವರು. ಎಲ್ಲ ಭಾಷಿಕರು ಹಾಗೂ ಸಮುದಾಯಗಳನ್ನು ಸಮನಾಗಿ ನೋಡುವ ಪರಂಪರೆ ಮೊದಲಿನಿಂದಲೂ ಇದೆ ಎಂದರು.
ಹಿಂದುತ್ವಕ್ಕಾಗಿ ಹೋರಾಡುತ್ತಿರುವ ಕಾಮಧೇನು ಗೋ ಶಾಲೆಯ ಲಕ್ಷ್ಮಣ್, ಸಂತೋಷ್ ಕೋಟ್ಯಾನ್, ತುಡುಕೂರು ಮಂಜು, ರಾಜು ಕಲ್ಲುದೊಡ್ಡಿ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್ ಮುಖಂಡರಾದ ಸಂಜಿತ ಸುವರ್ಣ, ಇಂದಿರಾ, ಶಾರದಾ, ಚಂದ್ರಕಲಾ, ಮಹೇಶ್ ಮೇದಾರ್, ನೀತೇಶ್, ನವೀನ್ ಮತ್ತಿತರಿದ್ದರು.