ಐಮಂಗಲ: ಕರೊನಾ ಸೋಂಕಿನ ಬಗ್ಗೆ ತಾತ್ಸಾರ ಬೇಡ. ಸದಾ ಎಚ್ಚರದಿಂದಿರಬೇಕು ಎಂದು ವೃತ್ತ ನಿರೀಕ್ಷಕ ಕೆ.ಆರ್.ರಾಘವೇಂದ್ರ ಹೇಳಿದರು.
ಗ್ರಾಮದ ಪೊಲೀಸ್ ಠಾಣೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ಕುಡಿವ ನೀರು, ದಿನಸಿ, ತರಕಾರಿ ಮಾರಾಟ ಸಮಸ್ಯೆ ದೂರುಗಳು ಸಾರ್ವಜನನಿಕರಿಂದ ಕೇಳಿ ಬಂದವು. ಪ್ರತಿಕ್ರಿಯಿಸಿದ ಸಿಪಿಐ, ಈ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವುದಾಗಿ ಭರವಸೆ ನೀಡಿದರು.
ಲಾಕ್ಡೌನ್ ಮುಗಿಯುವರೆಗೆ ಮನೆಯಲ್ಲೇ ಇರಿ. ಆರೋಗ್ಯ ತೊಂದರೆ ಹೊರತು ಏನಾದರು ತುರ್ತು ಕೆಲಸವಿದ್ದರೆ ಇಲಾಖೆಯಿಂದ ಪಾಸ್ ಪಡೆದು ಹೊರಬರಬೇಕು ಎಂದು ತಿಳಿಸಿದರು.
ಕೋವೆರಹಟ್ಟಿ ಎನ್.ಉಮಾಪತಿ, ಹರ್ತಿಕೋಟೆ ಎಂ.ಡಿ.ರಂಗನಾಯಕ ಮಾತನಾಡಿ, ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಈರುಳ್ಳಿ ಬೆಳೆದು ಹೊಲದಲ್ಲಿಯೇ ಸಂಗ್ರಹಿಸಿಕೊಂಡಿದ್ದಾರೆ. ಲಾಕ್ಡೌನ್ ಕಾರಣ ಮಾರಾಟ ಸಮಸ್ಯೆಯಾಗಿದೆ. ಜಿಲ್ಲಾಡಳಿತ ಕೂಡಲೇ ಖರೀದಿದಾರರನ್ನು ಗ್ರಾಮಕ್ಕೆ ಕಳುಹಿಸಿ ಸೂಕ್ತ ಬೆಲೆಗೆ ಖರೀದಿಸುವ ಹಾಗೂ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಮನವಿ ಮಾಡಿದರು.
ಮುಂಗಾರು ಬಿತ್ತನೆ ಕಾಲ ಆರಂಭವಾಗಿದ್ದು ತುರ್ತಾಗಿ ಬಿತ್ತನೆ ಬೀಜದ ವ್ಯವಸ್ಥೆ ಮಾಡಬೇಕು ಎಂದು ಕೋರಿದರು.
ಪಿಎಸ್ಐ ಎ.ಮಂಜುನಾಥ್, ಪ್ರೊಬೇಷನರಿ ಪಿಎಸ್ಐ ಪರಶುರಾಮ್ ಎನ್.ಲಮಾಣಿ, ಸಿಬ್ಬಂದಿ ಜಯರಾಮ್, ರಮೇಶ್ರಾಜ್, ರವಿ, ವೀರೇಶ್, ಹಿರಿಯರಾದ ಎನ್.ತಿಪ್ಪೀರಯ್ಯ, ಸಿ.ರಾಧಾಕೃಷ್ಣ, ಮಂಜುನಾಥರೆಡ್ಡಿ ಇದ್ದರು.