ಐಮಂಗಲ: ಚಿತ್ರದುರ್ಗ ಜಿಲ್ಲೆ ಬುರುಜಿನರೊಪ್ಪ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಕಾರಿನ ಹಿಂಬದಿ ಟೈರ್ ಸಿಡಿದು ರಸ್ತೆ ಬದಿಯ ಕಬ್ಬಿಣದ ಫೆನ್ಸಿಂಗ್ ಹಾಗೂ ಕಂಬಕ್ಕೆ ಡಿಕ್ಕಿ ಹೊಡೆದು ಒಬ್ಬ ಸ್ಥಳದಲ್ಲೇ ಮೃತಪಟ್ಟು, ಐವರು ಗಾಯಗೊಂಡ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ಘಟನೆ ವಿವರ: ಹನುಮಂತರಾಯ ಹಾಗೂ ಹನುಮಂತ ಕುಕನೂರು ಎಂಬುವವರು ಬೆಂಗಳೂರಿನಲ್ಲಿ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ರಜೆ ಹಿನ್ನೆಲೆಯಲ್ಲಿ ಸ್ವಗ್ರಾಮ ಕಲಬುರಗಿ ಜಿಲ್ಲೆ ಅಳಂದ ತಾಲೂಕಿನ ಸಲಗಾರ್ ಗ್ರಾಮಕ್ಕೆ ಹೋಗಿ ವಾಪಸ್ ಚಿತ್ರದುರ್ಗದ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ.
ಅಪಘಾತದ ತೀವ್ರತೆಗೆ ಕಾರು ಚಲಾಯಿಸುತ್ತಿದ್ದ ಹನುಮಂತರಾಯ (30) ಎಂಬುವರ ತಲೆಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದಾರೆ. ಗಾಯಾಳು ಹನುಮಂತ ಕುಕನೂರು, ಶಶಿಕುಮಾರ್, ಪುಷ್ಪಾಂಜಲಿ, ಅರ್ಚನಾ ಹಾಗೂ ಸಾಯಿನಾಥ್ ಇವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಎಸ್ಪಿ ಜಿ.ರಾಧಿಕಾ, ಎಎಸ್ಪಿ ಮಹಾಲಿಂಗ ನಂದಗಾವಿ, ಡಿವೈಎಸ್ಪಿ ರಮೇಶ್, ಸಿಪಿಐ ಕೆ.ಆರ್.ರಾಘವೇಂದ್ರ, ಹಿರಿಯೂರು ಟೌನ್ ಪಿಎಸ್ಐ ಕೆ.ಅನಸೂಯ, ಪ್ರೊಬೇಷನರಿ ಪಿಎಸ್ಐ ಪರಶುರಾಮ್ ಎನ್.ಲಮಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಐಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.