ಮಡಿಕೇರಿ: ಸರ್ಕಾರಕ್ಕೆ ತೆರಿಗೆಯನ್ನು ವಂಚಿಸುತ್ತಿರುವ ವೈಟ್ಬೋರ್ಡ್ ಕಾನೂನು ಬಾಹಿರ ಟ್ಯಾಕ್ಸಿಗಳ ಮೇಲೆ ಕಾನೂನು ರೀತಿಯ ಕ್ರಮಗಳನ್ನು ಕೈಗೊಂಡು ನಿಷೆಧಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಟ್ಯಾಕ್ಷಿ ಡ್ರೈವರ್ಸ್ ಅಸೋಶಿಯೇಷನ್ ವತಿಯಿಂದ ಶುಕ್ರವಾರ ಮಡಿಕೇರಿಯಲ್ಲಿ ಡಿವೈಎಸ್ಪಿ ಕಚೇರಿ ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಕರ್ನಾಟಕ ಟ್ಯಾಕ್ಷಿ ಡ್ರೈವರ್ಸ್ ಅಸೋಶಿಯೇಷನ್ ಜಿಲ್ಲಾಧ್ಯಕ್ಷ ವಿನ್ಸೆಂಟ್ ಬಾಬು ಮಾತನಾಡಿ, ಜಿಲ್ಲೆಯ ೩, ತಾಲೂಕುಗಳ ಪ್ರತಿಯೊಂದು ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳ ಪ್ರವಾಸಿ ವಾಹನ ನಿಲ್ದಾಣಗಳಲ್ಲಿ ವೈಟ್ ಬೋರ್ಡ್ ಖಾಸಗಿ ಲಘು ವಾಹನಗಳನ್ನು ತಂದು ನಿಲ್ಲಿಸಿ ಪ್ರವಾಸಿಗರನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ತೆರಿಗೆ ಕಟ್ಟಿ ವಾಹನ ಚಲಾಯಿಸುತ್ತಿರುವ ಪ್ರವಾಸಿ ವಾಹನ ಚಾಲಕರಿಗೆ ನಷ್ಟವಾಗಿದೆ. ಆದ್ದರಿಂದ ಪೊಲೀಸ್ ಇಲಾಖೆ ಹಾಗೂ ಆರ್ಟಿಒ ಇಲಾಖೆ ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಕಾನೂನು ಬಾಹಿರ ಟ್ಯಾಕ್ಸಿಗಳ ಹಾವಳಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇದರಿಂದಾಗಿ ಸರ್ಕಾರಕ್ಕೆ ನಿಗದಿತ ತೆರಿಗೆಗಳನ್ನು ಕಟ್ಟಿ ವಾಣಿಜ್ಯ ಉದ್ದೇಶಗಳಿಗಾಗಿ ನಿಲ್ದಾಣಗಳಲ್ಲಿ ಬಾಡಿಗೆಯನ್ನು ಕಾಯುತ್ತಾ ನಿಲ್ಲುತ್ತಿರುವ ಪ್ರವಾಸಿ ವಾಹನಗಳಿಗೆ ಬಾಡಿಗೆ ಇಲ್ಲದೆಯೇ ನಷ್ಟವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಸಂಘದ ಜಿಲ್ಲಾ ರಕ್ಷಾಧಿಕಾರಿ ಎಂ.ಎ.ರಫೀಕ್, ಪ್ರಧಾನ ಕಾರ್ಯದರ್ಶಿ ರಕೀಬ್, ಪಿ.ಎ.ತಿರುಪತಿ ಮತ್ತಿತರರು ಇದ್ದರು.