ರಾಯಚೂರು: ತುಂಗಭದ್ರಾ ಎಡದಂಡೆ ಕಾಲುವೆ ಮೇಲ್ಭಾಗದಲ್ಲಿ ನಡೆಯುತ್ತಿರುವ ಅಕ್ರಮ ನೀರಾವರಿ ತಡೆಗಟ್ಟದಿದ್ದಲ್ಲಿ ರೈತರೊಂದಿಗೆ ತೆರಳಿ ಅಕ್ರಮ ಪಂಪ್ಸೆಟ್ಗಳನ್ನು ತೆರವುಗೊಳಿಸಲಾಗುವುದು ಎಂದು ತುಂಗಭದ್ರಾ ಎಡದಂಡೆ ನಾಲೆ ಹಿತರಕ್ಷಣಾ ಸಮಿತಿ ಸಂಚಾಲಕ ರಾಘವೇಂದ್ರ ಕುಷ್ಟಗಿ ಎಚ್ಚರಿಸಿದರು.
ಜೆಸಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಪಕ್ಷಾತೀತವಾಗಿ ಸತ್ಯ ಶೋಧನಾ ಸಮಿತಿ ರಚನೆ ಮಾಡಿ ಕಾಲುವೆಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಮುಖ್ಯ ಕಾಲುವೆಯಿಂದ ಪಂಪ್ಸೆಟ್ಗಳ ಮೂಲಕ ನೀರು ಪಡೆಯುತ್ತಿರುವುದು ಕಂಡು ಬಂದಿದ್ದು, ದಾಖಲೆ ಸಮೇತ ವರದಿಯನ್ನು ಸಚಿವರು, ಅಧಿಕಾರಿಗಳಿಗೆ ನೀಡಲಾಗುತ್ತಿದೆ ಎಂದರು.
ಅಕ್ರಮವಾಗಿ ನೀರು ಪಡೆದು 2.50 ಲಕ್ಷ ಎಕರೆ ನೀರಾವರಿ ಮಾಡಿರುವುದರಿಂದ ಮಾನ್ವಿ, ರಾಯಚೂರು ತಾಲೂಕುಗಳಿಗೆ ನೀರು ತಲುಪದಂತಾಗಿದೆ. ಭೂಮಿಗಳು ಹೆಸರಿಗೆ ಮಾತ್ರ ನೀರಾವರಿಯಾಗಿದ್ದರೂ ಕಾಲುವೆಯಿಂದ ಹನಿ ನೀರು ದೊರೆಯದಂತಾಗಿದೆ. ಕಾಲುವೆ ಬಲಭಾಗದಲ್ಲಿ ದೊಡ್ಡ ಕೆರೆಗಳನ್ನು ನಿರ್ಮಿಸಿ ಪಂಪ್ಸೆಟ್ ಮೂಲಕ ಕಾಲುವೆಯಿಂದ ಕೆರೆಗೆ ನೀರು ಹರಿಸಲಾಗುತ್ತಿದೆ. ಕೆಲವರು ಬೃಹತ್ ಜನರೇಟರ್ಗಳನ್ನು ಇಟ್ಟುಕೊಂಡಿರುವುದು ಗಮನಕ್ಕೆ ಬಂದಿದೆ ಎಂದರು.
ಸಮಿತಿ ಪದಾಧಿಕಾರಿಗಳಾದ ಚಾಮರಸ ಮಾಲಿಪಾಟೀಲ್, ನಾಗನಗೌಡ ಹರವಿ, ತ್ರಿವಿಕ್ರಮ ಜೋಷಿ, ಜೆ.ಶರಣಪ್ಪಗೌಡ, ಎಂ.ವಿರುಪಾಕ್ಷಿ, ಯೂಸೂಫ್ಖಾನ್, ಕೊಂಡಾ ಕೃಷ್ಣಮೂರ್ತಿ, ಜಾನ್ವೆಸ್ಲಿ, ಖಾಜಾ ಅಸ್ಲಂ ಅಹ್ಮದ್ ಉಪಸ್ಥಿತರಿದ್ದರು.