ಚನ್ನಮ್ಮನ ಕಿತ್ತೂರು: ಯುದ್ಧ ಭೂಮಿಯಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ಭರತನಾಟ್ಯಕ್ಕೆ ಅವಕಾಶವಿಲ್ಲ. ರಣಭೈರವ ಎದ್ದು ನಿಂತಾಗಿದೆ. ಮೊಘಲರು ಸೇರಿ ಇತರರು ಹಿಂದುಗಳ ಮೇಲೆ ನಡೆಸಿದ ದೌರ್ಜನ್ಯಕ್ಕೆ ತಕ್ಕ ಉತ್ತರ ನೀಡುವ ಮೂಲಕ ಅಳಿಸಿರುವ ಹಿಂದು ದೇವಾಲಯಗಳು ತಲೆ ಎತ್ತಲಿವೆ ಎಂದು ಉತ್ತರಕನ್ನಡ ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬುಧವಾರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಒಬ್ಬರ ಸಂಕಲ್ಪದಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿಲ್ಲ. ಎಲ್ಲ ಹಿಂದುಗಳೂ ರಾಮಮಂದಿರ ಕನಸು ಹೊಂದಿದ್ದರು. ದೇವರ ಸಂಕಲ್ಪದಿಂದ ಮಂದಿರ ನಿರ್ಮಾಣವಾಗಿದೆ. ಎಲ್ಲ ಹಿಂದುಗಳಿಗೂ ಮುಕ್ತ ಅವಕಾಶವಿದ್ದು, ಆಮಂತ್ರಣ ದೊರೆತಿಲ್ಲ ಎಂದು ಕ್ಯಾತೆ ತೆಗೆಯುವ ಬದಲು ಮುಕ್ತ ಮನಸ್ಸಿನಿಂದ ದೇವಾಲಯಕ್ಕೆ ಬರಬಹುದಲ್ಲವೇ ಎಂದು ಪ್ರಶ್ನಿಸಿದರು.
ಬಾಟಲಿ ಹಾಲು ಕುಡಿದು ಬೆಳೆದವ ನಾನಲ್ಲ. ತಾಯಿಯ ಎದೆ ಹಾಲು ಕುಡಿದು ಬೆಳೆದಿದ್ದೇನೆ. ತಾಯಿ ಬಗ್ಗೆ ಹಾಗೂ ದೇಶದ ಬಗ್ಗೆ ನನಗೆ ಅಪಾರ ಗೌರವವಿದೆ. ತಾಯಿ ಹಾಗೂ ದೇಶದ ಬಗ್ಗೆ ಯಾರೇ ಕೆಟ್ಟದಾಗಿ ಮಾತನಾಡಿದರೆ ನಾನು ಸುಮ್ಮನಿರಲು ಸಾಧ್ಯವೇ ಇಲ್ಲ.ನಾನು ಸಹ ಮೈಸೂರಿನ ಗರಡಿಯಲ್ಲಿಯೇ ಪಳಗಿದ್ದೇನೆ. ಏಕವಚನದಲ್ಲಿ ಮಾತನಾಡಿದರೆ ನನ್ನ ಉತ್ತರವೂ ಅದೇ ಭಾಷೆಯಲ್ಲಿರುತ್ತದೆ ಎಂದು ಗುಡುಗಿದರು.
ಆರೋಗ್ಯದ ವ್ಯತ್ಯಾಸದಿಂದಾಗಿ ನನ್ನ ಹಾಗೂ ಕ್ಷೇತ್ರದ ಜನರ ನಡುವೆ ಸಂಪರ್ಕ ಕಡಿಮೆಯಾಗಿತ್ತು. ಇದರಿಂದಾಗಿಯೇ ಚುನಾವಣೆಯಿಂದ ದೂರ ಉಳಿಯುವ ನನ್ನ ಸ್ಪಷ್ಟ ನಿಲುವು ಮುಖಂಡರಿಗೆ ತಲುಪಿಸಿದ್ದೇನೆ. ಸೂಕ್ತ ವ್ಯಕ್ತಿಯನ್ನು ಪಕ್ಷ ಆಯ್ಕೆ ಮಾಡಲಿದೆ ಎಂದ ಅವರು, ಮೂರನೆಯ ಬಾರಿಯೂ ಮೋದಿ ಸರ್ಕಾರ ಶರ್ತಸಿದ್ಧ ಎಂದರು.
ಮಾಜಿ ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ರಾಜ್ಯದಲ್ಲಿ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ. ಬರ ಪರಿಸ್ಥಿತಿಯಲ್ಲಿಯೂ ರಾಜ್ಯ ಸರ್ಕಾರ ರೈತಾಪಿ ವರ್ಗಕ್ಕೆ ಅನುಕೂಲ ಒದಗಿಸುವಲ್ಲಿ ವಿಲಗೊಂಡಿದೆ ಎಂದು ಆರೋಪಿಸಿದರು.
ಬೆಳಗಾವಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಸುಭಾಷ ಪಾಟೀಲ ಹಾಗೂ ಕಿತ್ತೂರು ಮಂಡಲ ಅಧ್ಯಕ್ಷ ಬಸವರಾಜ ಪರವಣ್ಣವರ ಮಾತನಾಡಿದರು. ಚನ್ನಬಸಪ್ಪ ಮೊಕಾಶಿ, ಜಗದೀಶ ವಸ್ತ್ರದ, ವಿಶ್ವನಾಥ ಬಿಕ್ಕಣ್ಣವರ, ಬಿ.ಎ್.ಕೊಳದೂರ, ಅಪ್ಪಣ್ಣ ಪಾಗಾದ, ಶ್ರೀಕರ ಕುಲಕರ್ಣಿ, ಉಳವಪ್ಪ ಉಳ್ಳೆಗಡ್ಡಿ, ನಿಜಲಿಂಗಯ್ಯ ಹಿರೇಮಠ, ಚಿನ್ನಪ್ಪ ಮುತ್ನಾಳ, ಸರಸ್ವತಿ ಹೈಬತ್ತಿ ಇತರರು ಇದ್ದರು.