More

    ದೇವರಲ್ಲಿ ಪ್ರೀತಿ ಇದ್ದರೆ ಅದೇ ನೈಜ ಭಕ್ತಿ: ರಾಘವೇಶ್ವರ ಶ್ರೀ

    ಸಾಗರ: ಭಕ್ತಿಯನ್ನು ಕಲಿಯುವುದಕ್ಕೆ ಹೊಸ ಗುರುಕುಲದ ಅಗತ್ಯವಿಲ್ಲ. ಯಾರಲ್ಲಿ ದೇವರ ಮೇಲೆ ಪ್ರೀತಿ ಇದೆಯೋ ಅದೇ ಭಕ್ತಿ ಎಂದು ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
    ತಾಲೂಕಿನ ಸಾಲೇಕೊಪ್ಪ ಅಟ್ಟೆಮನೆ ಶ್ರೀನಿವಾಸ ಮತ್ತು ಕುಟುಂಬದವರು ಗುರುವಾರ ಏರ್ಪಡಿಸಿದ್ದ ಗುರುಭಿಕ್ಷಾ ಕಾರ್ಯಕ್ರಮದ ಧರ್ಮಸಭೆಯಲ್ಲಿ ಅಶೀರ್ವಚನ ನೀಡಿದರು.
    ಪ್ರೀತಿ ಎನ್ನುವ ಸರಳ ಶಬ್ದದ ನಾನಾ ರೂಪಗಳ ಮೂಲ ದ್ರವ್ಯ ಒಂದೇ. ಉದಾಹರಣೆಗೆ ದೇವರು, ಗುರುಗಳು, ಹಿರಿಯರ ಮೇಲೆ ನಮಗೆ ಪ್ರೀತಿ ಇದ್ದರೆ ಅದು ಭಕ್ತಿ ಎನ್ನಿಸಿಕೊಳ್ಳಲಿದೆ. ಅದೇ ದೇವರು, ಗುರುಗಳು, ಹಿರಿಯರು ನಮ್ಮ ಮೇಲೆ ಪ್ರೀತಿ ಇಟ್ಟರೆ ಅದು ಅನುಗ್ರಹ, ಆಶೀರ್ವಾದ ಎನಿಸಿಕೊಳ್ಳಲಿದೆ. ನಮ್ಮ ಮೇಲಿನ ಪಾಲಕರ ಪ್ರೀತಿಯನ್ನು ವಾತ್ಸಲ್ಯ ಎಂದು ಹೆಸರು. ಸ್ನೇಹಿತರ ಮೇಲೆ ಪ್ರೀತಿ ಇದ್ದರೆ ಅದು ಗೆಳೆತನ. ಕಷ್ಟದಲ್ಲಿದ್ದವರ ಮೇಲೆ ಪ್ರೀತಿ ಇದ್ದರೆ ಅದು ಕಾರುಣ್ಯ ಹೀಗೆ ಜೀವಿಯ ಬದುಕಿಗೆ ಅತ್ಯಮೂಲ್ಯವಾಗಿ ಇರಬೇಕಾದದ್ದು ಪ್ರೀತಿ. ಅದು ಸರಳವಾಗಿ ಕಂಡರೂ ಅತ್ಯಂತ ಮಹತ್ವದ್ದು ಎಂದರು.

    ವ್ಯಕ್ತಿಯೊಬ್ಬನೂ ಎಂದಿಗೂ ತನ್ನ ದುಡಿಮೆಯ ಅನ್ನ ಹೊರತುಪಡಿಸಿ ಪರರ ಅನ್ನವನ್ನು ತಿನ್ನಬಾರದು ಎನ್ನುವ ನಿಯಮವಿದೆ. ಆದರೆ ಎರಡು ಸಂದರ್ಭದಲ್ಲಿ ಮಾತ್ರ ಬೇರೆ ಸ್ವೀಕರಿಸಬಹುದು. ಅದು ಪರಸ್ಪರ ಪ್ರೀತಿ ಇದ್ದವರ ಮನೆಯಲ್ಲಿ ಭೋಜನ ಮಾಡಬಹುದು ಮತ್ತು ಆಪತ್ಕಾಲದಲ್ಲಿ ಊಟ ಮಾಡಬಹುದು. ಇದು ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಕೌರವನಲ್ಲಿಯೇ ಹೇಳಿದ್ದ ಮಾತು ಎಂದು ಅಂದಿನ ಕತೆಯ ವಿವರಣೆಯೊಂದಿಗೆ ಪ್ರೀತಿಯ ಮಹತ್ವ ವಿವರಿಸಿದರು. ಸಾಗರ ಹವ್ಯಕ ಮಂಡಲದ ಹಾಗೂ ಕೋಗೋಡು, ಗೋಳುಗೋಡು ಹವ್ಯಕ ವಲಯದ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts