More

    ರೋಡ್ ಮ್ಯಾಲೆ ಒದರಕೋಂತ ತಿರುಗಿದ್ರ ತಲೆ ಕೆಟ್ಟಾದ ಅಂತಾರ..!

    ವಿಜಯಪುರ: ಸಚಿವ ಸ್ಥಾನ ಸಿಕ್ಕಿಲ್ಲಂತ ರೋಡ್ ರೋಡ್ ಒದರಾಡಿಕೊಂಡು ತಿರುಗಾಡಿದ್ರ ಜನ ತಲಿ ಕೆಟ್ಟಾದ ಅಂತಾರ…. ಏನೇ ಅಸಮಾಧಾನ ಇದ್ರೂ ವೇದಿಕೆ ಮೇಲೆ ಚರ್ಚೆ ಮಾಡಬೇಕು…. ಹೊಟ್ಟಿಯೊಳಗಿನ ಸಿಟ್ಟ ವರಿಷ್ಠರ ಮುಂದೆ ಕಾರಕೋಬೇಕು.. ಅದನ್ನು ಬಿಟ್ಟು ಬಾಯಿಗೆ ಹದ್ದಿಲ್ಲದಂಗ ಯದ್ವಾತದ್ವಾ ಮಾತಾಡಬಾರದು..!

    ಇದು ಕೇಂದ್ರದ ಮಾಜಿ ಸಚಿವ ಸಂಸದ ರಮೇಶ ಜಿಗಜಿಣಗಿ ಸಚಿವ ಸ್ಥಾನ ವಂಚಿತ ಅಸಮಾಧಾನಿತ ಶಾಸಕರಿಗೆ ನೀಡಿದ ತಿರುಗೇಟು. ಶುಕ್ರವಾರ ಅಯೋಧ್ಯೆ ರಾಮ ಮಂದಿರ ನಿರ್ಮಾಣದ ನಿಧಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

    ಶಾಸಕ ಯತ್ನಾಳ ಒಬ್ಬರೇ ಅಂತಲ್ಲ, ಯಾರು ಯಾರು ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೋ ಅವರೆಲ್ಲರನ್ನೂ ಸೇರಿಸಿ ಒಟ್ಟಾರೆಯಾಗಿ ಹೇಳುತ್ತಿದ್ದೇನೆ. ಮಂತ್ರಿ ಮಾಡಿಲ್ಲವೆಂದು ಯಡಿಯೂರಪ್ಪ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನಾಡಬಾರದು. ನಾನೂ ಕೇಂದ್ರದ ಮಂತ್ರಿಯಾಗಿದ್ದೆ, ಆ ಬಳಿಕ ವರಿಷ್ಠರ ತೀರ್ಮಾನಕ್ಕೆ ತಲೆ ಬಾಗಿ ಸಂಸದನಾಗಿ ಮಾತ್ರ ಉಳಿದಿದ್ದೇನೆ. ಹಾಗಂತ ನಾನೇನು ನಾಯಿಯಂತೆ ಬೊಗಳಿಕೊಂಡು ತಿರುಗಾಡಿದೆನಾ? ಎಂದು ಪ್ರಶ್ನಿಸಿದರು.

    ಯಡಿಯೂರಪ್ಪ ಹಿರಿಯ ರಾಜಕಾರಣಿ. ಸಾಕಷ್ಟು ಅನುಭವ ಇದೆ. ನಾವೆಲ್ಲ ಅವರಿಗೆ ಸಾಕಷ್ಟು ಗೌರವ ಕೊಡುತ್ತೇವೆ. ಅಂಥ ಮನುಷ್ಯನ ಬಗ್ಗೆ ಮಾತಾಡೋದು ಸರಿಯಲ್ಲ. ಈ ಹಿಂದೆ ಪಕ್ಷಕ್ಕೆ ಸೇರಿಸಿಕೊಳ್ಳುವ ಸಂದರ್ಭ ಯಡಿಯೂರಪ್ಪಗೆ ನಾನೇ ಬುದ್ಧಿವಾದ ಹೇಳಿದ್ದೆ. ಇಂಥವರನ್ನೆಲ್ಲ ಪಕ್ಷಕ್ಕೆ ಸೇರಿಸಿಕೊಳ್ಳಬೇಡಿ. ಸೇರಿಸಿಕೊಳ್ಳುವುದರಿಂದ ನಮಗೇನೂ ಸಮಸ್ಯೆ ಇಲ್ಲ. ಆಮೇಲೆ ನೀವೇ ಅನುಭವಿಸುತ್ತೀರಿ ನೋಡಿ ಎಂದಿದ್ದೆ. ಈಗ ಅನುಭವಿಸುವಂತಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts